LATEST NEWS
ಮಂಗಳೂರು – ಬಾರ್ ನಲ್ಲಿ ಗಲಾಟೆ ಯುವಕನಿಗೆ ಚೂರಿ ಇರಿತ

ಮಂಗಳೂರು ಜೂನ್ 08: ಬಾರ್ ನಲ್ಲಿ ಎರಡು ತಂಡಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಯುವಕನಿಗೆ ನಾಲ್ವರು ಚೂರಿ ಇರಿದ ಘಟನೆ ನಗರ ಹೊರವಲಯದ ಯೆಯ್ಯಾಡಿಯ ಪ್ರಣಾಮ್ ಬಾರ್ನಲ್ಲಿ ಶುಕ್ರವಾರ ನಡೆದಿದೆ.
ಕೌಶಿಕ್ ಎಂಬಾತ ಚೂರಿ ಇರಿತಕ್ಕೆ ಒಳಗಾದವ. ಚೈನೀಸ್ ಗಣೇಶ್, ಶಿಜು ಮತ್ತು ಬೃಜೇಶ್ ಮತ್ತು ಇನ್ನೊಬ್ಬ ವ್ಯಕ್ತಿ ಚೂರಿಯಿಂದ ಹಲ್ಲೆ ನಡೆಸಿದ ಆರೋಪಿಗಳು’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಕೌಶಿಕ್ ಸ್ನೇಹಿತ ರಾಹುಲ್ ಎಂಬುವರು ದೂರು ನೀಡಿದ್ದು, ನಗರ ಪೂರ್ವ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗೆಳೆಯ ಕೌಶಿಕ್ ನನ್ನನ್ನು ಪ್ರಣಾಮ್ ಬಾರ್ಗೆ ಶುಕ್ರವಾರ ಮಧ್ಯಾಹ್ನ ಊಟಕ್ಕೆ ಕರೆದಿದ್ದ. ಅಲ್ಲಿಗೆ ಹೋದಾಗ ಟೇಬಲ್ ಒಂದರ ಪಕ್ಕದಲ್ಲಿ ಕುಳಿತಿದ್ದ ಮೂವರು ಕೌಶಿಕ್ ಜೊತೆ ಜಗಳವಾಡುತ್ತಿದ್ದರು. ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದೆ. ಗಲಾಟೆ ಜೋರಾದಾಗ ಬಾರ್ನ ಸಿಬ್ಬಂದಿ ಅವರನ್ನೆಲ್ಲ ಹೊರಗೆ ಹೋಗುವಂತೆ ಸೂಚಿಸಿದ್ದರು. ಅಷ್ಟರಲ್ಲಿ ಹೊರಗಿನಿಂದ ಬಂದ ವ್ಯಕ್ತಿ ಕೌಶಿಕ್ ಹೊಟ್ಟೆಗೆ ಹಾಗೂ ಎದೆಗೆ ಚೂರಿಯಿಂದ ಇರಿದ. ನಾನು ಜೋರಾಗಿ ಬೊಬ್ಬೆ ಹಾಕಿದಾಗ ಅವರೆಲ್ಲರೂ ಓಡಿ .ಹೋದರು. ಬಾರ್ನ ಕೆಲಸಗಾರರು ಗಾಯಾಳುವನ್ನು ತಕ್ಷಣವೇ ಕುಂಟಿಕಾನದ ಎ.ಜೆ. ಆಸ್ಪತ್ರೆಗೆ ದಾಖಲಿಸಿದರು.

ಗಲಾಟೆ ಮಾಡಿದವರು ತನ್ನ ಪರಿಚಯದವರೇ ಆದ ಆಟೊ ಚಾಲಕ ಚೈನೀಸ್ ಗಣೇಶ್, ಶಿಜು ಬ್ರಿಜೇಶ್. ತಿಂಗಳ ಹಿಂದೆ ಸಂತು ಎಂಬಾತನ ಜೊತೆಗೆ ಜಗಳವಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು, ತನ್ನನ್ನು ಕೊಲ್ಲುವ ಉದ್ದೇಶದಿಂದ ಚೂರಿ ಇರಿದಿದ್ದಾರೆ ಎಂದು ಕೌಶಿಕ್ ಹೇಳಿರುವುದಾಗಿ ರಾಹುಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲಿಸರು ತಿಳಸಿದ್ದಾರೆ.