BANTWAL
ಬಂಟ್ವಾಳ – ತುಂಬು ಗರ್ಭಿಣಿ ಹೆಂಡತಿಯ ಹತ್ಯೆ ಮಾಡಿ ನೇಣಿಗೆ ಶರಣಾದ ಪತಿ

ಬಂಟ್ವಾಳ ಜೂನ್ 19: ತುಂಬು ಗರ್ಭಿಣಿ ಪತ್ನಿ ಮತ್ತು ಆಕೆಯ ಪತಿಯ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ಪತ್ನಿಯ ಕೊಲೆಗೈದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಡಗುಂಡಿ ನಿವಾಸಿ ತಿಮ್ಮಪ್ಪ ಮೂಲ್ಯ (52) ಎಂಬಾತ ಗರ್ಭಿಣಿಯಾಗಿದ್ದ ಪತ್ನಿ ಜಯಂತಿ (45)ಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ತಿಮ್ಮಪ್ಪ ಮೂಲ್ಯ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜಯಂತಿ ಜೊತೆ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ತಿರುಗಿದ್ದು, ಆರೋಪಿ ತಿಮ್ಮಪ್ಪ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಕೂಡಾ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಮ್ಮಪ್ಪರ ಮನೆ ಮಿತ್ತಮಜಲಿನಲ್ಲಿದ್ದು, ಜಯಂತಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಸದ್ಯ ಜಯಂತಿ ಗರ್ಭಿಣಿಯಾಗಿದ್ದು, ಜುಲೈ 2ಕ್ಕೆ ಸೀಮಂತಕ್ಕೆ ದಿನಾಂಕ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಮೃತರ ಮನೆಯಲ್ಲಿ ದುಃಖ ಆವರಿಸಿದೆ.
ಈ ಬಗ್ಗೆ ಮೃತ ಜಯಂತಿ ಅವರ ತಂಗಿ ಫರಂಗಿಪೇಟೆಯ ಸುಜಾತಾ ದೂರು ನೀಡಿದ್ದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ತಿಮ್ಮಪ್ಪ ಅವರ ಆತ್ಮಹತ್ಯೆ ಬಗ್ಗೆ ಅವರ ಅಣ್ಣ ಸಜೀಪ ಮೂಡ ವಿಶ್ವನಾಥ ದೂರು ನೀಡಿದ್ದು ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. ಬಂಟ್ವಾಳ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Pingback: ಬಂಟ್ವಾಳ - ಸೀಮಂತದ ದಿನ ನಿಗದಿಯಾಗಿದ್ದ ಗರ್ಭಿಣಿ ಹಾಗೂ ಪತಿಯ ಮೃತದೇಹ ಪತ್ತೆ - themangaloremirror.in