DAKSHINA KANNADA
ಅರುಣ್ ಕುಮಾರ್ ಪುತ್ತಿಲ ಗಡಿಪಾರಿಗೆ ಸಿದ್ದತೆ ಮಾಡಿಕೊಂಡಿದ್ದ ಪೊಲೀಸರಿಗೆ ಹಿನ್ನಡೆ – ಸಮರ್ಪಕ ದಾಖಲೆ ಕೊಡಿ ಎಂದು ಉಪ ವಿಭಾಗಾಧಿಕಾರಿ ಆದೇಶ

ಪುತ್ತೂರು, ಜೂನ್ 6 : ಇತ್ತಿಚೆಗೆ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಬೆನ್ನಲ್ಲೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರಿಗೆ ಸಿದ್ದತೆ ಮಾಡಿಕೊಂಡಿದ್ದ ಪೊಲೀಸರಿಗೆ ಹಿನ್ನಡೆಯಾಗಿದೆ. ಗಡೀಪಾರು ನೋಟಿಸ್ ನೀಡಿ ಜೂನ್ 6ರಂದು ಪುತ್ತೂರು ಉಪ ವಿಭಾಗಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಇದರಂತೆ, ಅರುಣ್ ಪುತ್ತಿಲ ಪರವಾಗಿ ವಕೀಲ ನರಸಿಂಹ ಪ್ರಸಾದ್ ಹಾಜರಾಗಿದ್ದು, ಪುತ್ತಿಲ ಪರವಾಗಿ ವಾದ ಮಂಡಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಅವರನ್ನು ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ನೋಟಿಸ್ ನೀಡಿ ಜೂನ್ 6ರಂದು ಪುತ್ತೂರು ಉಪ ವಿಭಾಗಾಧಿಕಾರಿ ಮುಂದೆ ಈ ಬಗ್ಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಈ ವೇಳೆ ವಾದಮಂಡಿಸಿದ ವಕೀಲರು ಅರುಣ್ ಪುತ್ತಿಲ ಅವರನ್ನು ಗಡೀಪಾರು ಮಾಡುವುದಕ್ಕೆ ಇರುವ ಮಾನದಂಡಗಳೇನು ಮತ್ತು ಪೊಲೀಸ್ ಇಲಾಖೆಯಲ್ಲಿ ಮಾಡಿಕೊಂಡಿರುವ ಆರೋಪ ಪಟ್ಟಿ ಅಥವಾ ಆ ಕುರಿತ ದಾಖಲೆ ಏನಿದೆ ಎಂದು ಉಪ ವಿಭಾಗಾಧಿಕಾರಿ ಮುಂದೆ ಪ್ರಶ್ನೆ ಮಾಡಿದ್ದಾರೆ. ಪುತ್ತಿಲ ಅವರಿಗೆ ನೀಡಿದ್ದ ನೋಟೀಸಿನಲ್ಲಿ ಕಳೆದ ಬಾರಿ ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರ ಸ್ಪರ್ಧಿಸಿದ್ದಾಗ, ಯೋಗಿ ಮತ್ತು ಮೋದಿಯವರ ಫೋಟೋ ಬಳಸಿದ್ದಕ್ಕಾಗಿ ಮಾಡಿದ್ದ ಕೇಸು, 2013ರಲ್ಲಿ ದಾಖಲಾಗಿದ್ದ ಕೇಸಿನ ವಿವರಗಳಿದ್ದವು. ಇವೆರಡೂ ಪ್ರಕರಣಗಳು ಕೋರ್ಟಿನಲ್ಲಿ ಖುಲಾಸೆಗೊಂಡಿವೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಎಸಿ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಹಾಜರಿದ್ದರೂ, ಸಮರ್ಪಕ ದಾಖಲೆಗಳನ್ನು ಒದಗಿಸಲು ಮುಂದಾಗಿಲ್ಲ. ಇದರಂತೆ, ಉಪ ವಿಭಾಗಾಧಿಕಾರಿ ಮುಂದಿನ ವಿಚಾರಣೆಯನ್ನು ಜೂನ್ 27ಕ್ಕೆ ಮುಂದೂಡಿದ್ದು, ಪೊಲೀಸರು ಸಮರ್ಪಕ ದಾಖಲೆ ಒದಗಿಸುವಂತೆ ಆದೇಶ ಮಾಡಿದ್ದಾರೆ.