DAKSHINA KANNADA
ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಮಂಗಳೂರು ಫೆಬ್ರವರಿ 20: ರಾಜ್ಯದ ಕರಾವಳಿಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ನಿನ್ನೆ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಜ್ವರದಿಂದ ಬಳಲುತ್ತಿದ್ದ ಅಮಿತ್ ಶಾ ಅವರಿಗೆ ಸುಬ್ರಹ್ಮಣ್ಯ ದಲ್ಲಿಯೇ ತಜ್ಞ ವೈದ್ಯರು ಚಿಕಿತ್ಸೆಯನ್ನು ನೀಡಿದ್ದರು. ಇಂದು ಜ್ವರದಿಂದ ಚೇತರಿಸಿ ಕೊಂಡ ಅಮಿತ್ ಶಾ ಮುಂಜಾನೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದರು.
ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, ಅಮಿತ್ ಶಾ ಅವರ ಹೆಸರಿನಲ್ಲಿ ಅರ್ಚಕರು ಕುಕ್ಕೆ ಸುಬ್ರಹ್ಮಣ್ಯ ನಿಗೆ ಅರ್ಚನೆ ಸಲ್ಲಿಸಿದರು. ಜ್ವರದಿಂದಾಗಿ 45 ನಿಮಿಷ ತಡವಾಗಿ ದೇವಾಲಯಕ್ಕೆ ಆಗಮಿಸಿದ ಅಮಿತ್ ಶಾ ಅವರೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸ್ಥಳೀಯ ಶಾಸಕ ಅಂಗಾರ ಮತ್ತಿತರರು ಜೊತೆಗಿದ್ದರು.

ನಂತರ ಸುಬ್ರಹ್ಮಣ್ಯ ಮಠ ಕ್ಕೆ ತೆರಳಿದ ಅಮಿತ್ ಶಾ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ಅಮಿತ್ ಶಾ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದಾದಲ್ಲಿ ಆಯೋಜಿಸಲಾಗಿರುವ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಲು ತೆರಳಿದರು.
ನಿನ್ನೆ ಜ್ವರದಿಂದ ಬಳಲಿದ ಅಮಿತ್ ಶಾ ಅವರಿಗೆ ಇಂದಿನ ಕಾರ್ಯಕ್ರಮಗಳಲ್ಲಿ ಕುಳಿತು ಮಾತನಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ಶಾ ಅವರಿಗೆ ನಿಂತಿಕಲ್ ಆಯುರ್ವೇದ ಪಂಚಕರ್ಮ ಸೆಂಟರ್ ನ ರಾಜಶೇಖರ್ ಮುಂಜಾನೆ ಮಸಾಜ್ ಚಿಕಿತ್ಸೆ ನೀಡಿದ್ದಾರೆ.