LATEST NEWS
ಹರೇಕಳ- ಅಡ್ಯಾರ್ ಸೇತುವೆ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಮುಕ್ತ

ಮಂಗಳೂರು ಎಪ್ರಿಲ್ 1 : ಅಡ್ಯಾರ್ -ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇಂದಿನಿಂದ ಅಧಿಕೃತವಾಗಿ ಸಂಚಾರ ಆರಂಭಗೊಂಡಿದೆ.ಬಹುಪಯೋಗಿ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್-ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಈ ಸೇತುವೆಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಈ ಮೂಲಕ ಈ ಭಾಗದ ಜನರ ದಶಕಗಳ ಕನಸು ನನಸಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸೇತುವೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸುವಂತಿಲ್ಲ. ಗ್ರಾಮಸ್ಥರು ಸೇತುವೆಯ ಬಳಕೆಗೆ ಅವಕಾಶ ಮಾಡಿಕೊಡುವಂತೆ ಸ್ಥಳೀಯ ಶಾಸಕರಾಗಿದ್ದ ಯು.ಟಿ. ಖಾದರ್ ಬಳಿ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪರಿಗಣಿಸಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಹಾಗಾಗಿ ಅತ್ಯಂತ ಎಚ್ಚರಿಕೆ ವಹಿಸಿ ವಾಹನ ಚಲಾಯಿಸ ಬೇಕಿದೆ ಎಂದು ಯು.ಟಿ. ಖಾದರ್ ಮನವಿ ಮಾಡಿದ್ದಾರೆ.

195.50 ಕೋ.ರೂ. ವೆಚ್ಚದ ಈ ಸೇತುವೆ ಮತ್ತು ಅಣೆಕಟ್ಟು ಕಾಮಗಾರಿ ಬಹುತೇಕ ಮುಗಿದಿದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ ನೀರಾವರಿ ಇಲಾಖೆಯಡಿ ಅತಿದೊಡ್ಡ ಯೋಜನೆಯ ಕಾಮಗಾರಿ ಎನ್ನುವ ಖ್ಯಾತಿಯೂ ಇದಕ್ಕಿದೆ. ಸೇತುವೆಯು 520 ಮೀ. ಉದ್ದವಿದ್ದು, 10.6 ಮೀ. ಎತ್ತರ, 10 ಮೀ. ಅಗಲ ಹಾಗೂ ಇಕ್ಕೆಲಗಳಲ್ಲಿ ಕಾಲುದಾರಿಯೂ ಇದೆ. ಅಣೆಕಟ್ಟಿನಿಂದ ಸಂಗ್ರಹವಾಗುವ ಸಿಹಿನೀರನ್ನು ಉಳ್ಳಾಲ ಪ್ರದೇಶದ ಮನೆ, ವ್ಯವಹಾರ ಕೇಂದ್ರಗಳಿಗೆ ಮೀಟರ್ ಅಳವಡಿಸಿ 24 ಗಂಟೆಯೂ ನೀರಿನ ವ್ಯವಸ್ಥೆ ಮಾಡುವ ಯೋಜನೆಯೂ ಇದೆ. ಈ ಸೇತುವೆಯು ಹರೇಕಳ ಗ್ರಾಮವಲ್ಲದೆ ಪಾವೂರು, ಕೊಣಾಜೆ, ಪಜೀರ್ ಗ್ರಾಮಸ್ಥರ ಪಾಲಿಗೆ ಮಂಗಳೂರು ಪ್ರಯಾಣ ಅತ್ಯಂತ ಹತ್ತಿರವಾಗಲಿದೆ. ದೇರಳಕಟ್ಟೆ-ಮಂಗಳೂರು ನಡುವಿನ ವಾಹನ ದಟ್ಟಣೆ ಸಮಸ್ಯೆ ನೀಗಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.