KARNATAKA
ಎಸಿ ಸ್ಪೋಟ ಒಂದೇ ಕುಟುಂಬದ ನಾಲ್ವರ ಸಜೀವ ದಹನ

ವಿಜಯನಗರ ಎಪ್ರಿಲ್ 08: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಸಿ ಸ್ಪೋಟಗೊಂಡ ಪರಿಣಾಮ ಇಬ್ಬರು ಮಕ್ಕಳು ಸಹಿತ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸಂಭವಿಸಿದೆ.
ಮೃತರನ್ನು ವೆಂಕಟ್ ಪ್ರಶಾಂತ್ (42), ಚಂದ್ರಕಲಾ (38), ಅದ್ವಿಕ್ (16), ಪ್ರೇರಣಾ (8) ಎಂದು ಗುರುತಿಸಲಾಗಿದೆ. ಇದೇ ಮನೆಯಲ್ಲಿ ವಾಸವಿದ್ದ ರಾಘವೇಂದ್ರ ಶೆಟ್ಟಿ ಹಾಗೂ ಅವರ ಪತ್ನಿ ರಾಜಶ್ರೀ ಅವರು ಅಪಾಯದಿಂದ ಪಾರಾಗಿದ್ದಾರೆ.
ಮರಿಯಮ್ಮನಹಳ್ಳಿಯ ಐದನೇ ವಾರ್ಡಿನ ರಾಘವೇಂದ್ರ ಶೆಟ್ಟಿ ಅವರ ಮನೆಯಲ್ಲಿ ಗುರುವಾರ ತಡರಾತ್ರಿವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಬಳಿಕ ಎಸಿ ಲೀಕ್ ಆಗಿದೆ. ವಿಷಯ ಅರಿತು ಮನೆಯ ಕೆಳಭಾಗದಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿ, ಅವರ ಪತ್ನಿ ರಾಜೇಶ್ವರಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೆ, ಮನೆಯ ಮೊದಲ ಮಹಡಿಯ ಬೆಡ್ ರೂಮ್ ನಲ್ಲಿ ಮಲಗಿದ್ದ ವೆಂಕಟ್ ಪ್ರಶಾಂತ್, ಚಂದ್ರಕಲಾ, ಅರ್ದ್ವಿಕ್ ಹಾಗೂ ಪ್ರೇರಣಾ ಹೊರಗೆ ಬರಲಾಗದೆ ಉಸಿರುಗಟ್ಟಿ, ಸುಟ್ಟ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
