KARNATAKA
ಬಸ್ಸಿಗೆ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದು ದಾರುಣ ಮೃತ್ಯು..!
ಚಿತ್ರದುರ್ಗ : ಬೆಳ್ಳಂಬೆಳಗ್ಗೆ ಕಾಲೇಜಿಗೆ ಹೋಗಲು ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಮೇಲೆ ಯಮ ಸ್ವರೂಪಿಯಾಗಿ ಬಂದ ಲಾರಿ ಹರಿದು ವಿದ್ಯಾರ್ಥಿನಿ ಸಾವನ್ನಪ್ಪಿದ ದಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ವಿಜಾಪುರ ಬಳಿ ಈ ದಾರುಣ ಘಟನೆ ನಡೆದಿದೆ. ಲಾರಿ ಢಿಕ್ಕಿಗೆ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಪಿಯು ವಿದ್ಯಾರ್ಥಿನಿ ಸುಚಿತ್ರಾ (19) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಘಟನೆಯಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 4 ತಡೆದು ಗ್ರಾಮಸ್ಥರ ಧರಣಿ ಮಾಡಿದ್ದಾರೆ. ಸರ್ವೀಸ್ ರಸ್ತೆಗೆ ಬಸ್ ವ್ಯವಸ್ಥೆ ಕಲ್ಪಿಸದ್ದಕ್ಕೆ ಅಪಘಾತ ಸಂಭವಿಸಿದೆ. ಸರ್ವಿಸ್ ರಸ್ತೆಗೆ ಬಸ್ ಬಂದಿದ್ದರೆ ವಿದ್ಯಾರ್ಥಿನಿಗೆ ಹೀಗೆ ಆಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾರಿಗೆ ಇಲಾಖೆಯಿಂದ ಕೂಡಲೇ ಸರ್ವಿಸ್ ರಸ್ತೆ ಮೂಲಕ ವಿಜಾಪುರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಬೆಳಗ್ಗೆ ಶಾಲೆ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಇನ್ನು ಹೆದ್ದಾರಿ ತಡೆದು ಧರಣಿ ಆರಂಭಿಸಿದ್ದರಿಂದ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಧರಣಿ ನಿರತರನ್ನು ರಸ್ತೆಯಿಂದ ತೆರವುಗೊಳಿಸಲು ಭರಮ ಸಾಗರ ಠಾಣೆ ಪೊಲೀಸರು ತೀವ್ರ ಹರಸಾಹಸಪಡಬೇಕಾಯಿತು.ಘಟನೆ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
You must be logged in to post a comment Login