ಬಿಜೆಪಿ ಕಾರ್ಯಕರ್ತನ ಕೊಲೆ ಐವರು ಪಾತಕಿಗಳ ಬಂಧನ
ಮಂಗಳೂರು,ಅಕ್ಟೋಬರ್ 11: ಬಿಜೆಪಿ ಕಾರ್ಯಕರ್ತ ಜುಬೈರ್ ಹತ್ಯೆಗೆ ಸಂಬಂಧಿಸಿದಂತೆ ಉಳ್ಳಾಲ ಪೋಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ಟೋಬರ್ 4 ರಂದು ಆರೋಪಿಗಳು ಜುಬೈರ್ ನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಉಳ್ಳಾಲದ ಮಸೀದಿಯ ಪಕ್ಕದಲ್ಲೇ ಈ ಕೃತ್ಯ ನಡೆದಿದ್ದು, ಆರೋಪಿಗಳಾದ ಸುಹೈಲ್ , ನಿಜಾಮುದ್ಧೀನ್, ಮಹಮ್ಮದ್ ಮುಸ್ತಫಾ, ತಾಜುದ್ದೀನ್ ಹಾಗೂ ಮಂಡಾ ಆಸೀಫ್ ಬಿಜೆಪಿ ಕಾರ್ಯಕರ್ತ ಜುಬೈರ್ ನನ್ನು ದಾರುಣವಾಗಿ ಹತ್ಯೆ ನಡೆಸಿದ್ದರು.
ಹಳೆ ವೈಷ್ಯಮ್ಯವೇ ಈ ಕೊಲೆಗೆ ಕಾರಣವೆಂದು ಆರೋಪಿಗಳು ಪೋಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಇನ್ನೂ ಮೂವರು ಆರೋಪಿಗಳಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದು, ಶೀಘ್ರವೇ ಬಂಧಿಸುವುದಾಗಿ ಮಂಗಳೂರು ಪೋಲೀಸ ಕಮಿಷನರ್ ಟಿ.ಆರ್. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ ಪರಿಸರದಲ್ಲಿ ಗಾಂಜಾ ವ್ಯವಹಾರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಹಿಂದೆಯೂ ಇಲ್ಲಿ ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆಗಳು ನಡೆದಿವೆ.
ಪೋಲೀಸ್ ಕಾರ್ಯಾಚರಣೆಯ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಪೋಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮಂಗಳೂರಿನಲ್ಲಿ ಹೆಚ್ಚುತ್ತಿರುವ ಪಾತಕ ಕೃತ್ಯದ ಹಿನ್ನಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ರೌಡಿ ನಿಗ್ರಹ ದಳ ರಚನೆ ಮಾಡುವುದಾಗಿ ಹೇಳಿದರು.
ಸಿಸಿಬಿ ಪೋಲೀಸರೊಂದಿಗೆ ಈ ರೌಡಿ ನಿಗ್ರಹ ದಳವೂ ಕಾರ್ಯಾಚರಣೆ ನಡೆಸಲಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರ ರೌಡಿಗಳಿದ್ದು, ಎಲ್ಲಾ ರೌಡಿಗಳನ್ನು ಕರೆಸಿ ಈಗಾಗಲೇ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.



