Connect with us

    UDUPI

    2 ಪ್ರೌಢಶಾಲೆಗಳಿಗೆ ಸ್ವಚ್ಛ ವಿದ್ಯಾಲಯ ರಾಷ್ಟ್ರೀಯ ಪ್ರಶಸ್ತಿಯ ಗರಿ

    ಉಡುಪಿ, ಅಗಸ್ಟ್ 21 : ಭಾರತ ಸರಕಾರದ ಮಾನವ ಸಂಪದ ಸಚಿವಾಲಯ ಕೊಡಮಾಡುವ ಸ್ವಚ್ಛ ವಿದ್ಯಾಲಯ ರಾಷ್ಟ್ರೀಯ ಪ್ರಶಸ್ತಿಗೆ ಗ್ರಾಮೀಣ ಭಾಗದ ಶಾಲೆ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಸೂಡಾ ಸರಕಾರಿ ಪ್ರೌಢಶಾಲೆಯನ್ನು ಮತ್ತು ನಗರ ಭಾಗದಲ್ಲಿ ಕಾರ್ಕಳದ ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆಯನ್ನು ಆಯ್ಕೆ ಮಾಡಲಾಗಿದೆ.
    ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಸೂಡ ಸರಕಾರಿ ಪ್ರೌಢಶಾಲೆಯ ಪರಿಸರ ಸುಂದರ ಸ್ವಚ್ಛವಾಗಿದೆ. ಇದನ್ನು ಮಾನದಂಡವಾಗಿ ಸ್ವಚ್ಛ ವಿದ್ಯಾಲಯ ಪ್ರಶಸ್ತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಾಗೂ ಶಾಲಾ ಪರಿಸರ ಸ್ವಚ್ಛತೆಯ ಬಗ್ಗೆ ನಿರಂತರ ಕಾರ್ಯಕ್ರಮ ಮಾರ್ಗದರ್ಶನವನ್ನು ಇಲ್ಲಿನ ಅಧ್ಯಾಪಕರ ತಂಡ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳಿಗೆ ಘನತಾಜ್ಯ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಶೌಚಾಲಯ ನಿರ್ವಹಣೆ ನಲ್ಲಿ ನೀರಿನ ಬಳಕೆ, ಕೈತೊಳೆಯುವ ಬಗ್ಗೆ ಮಕ್ಕಳಿಗೆ ಶಾಲಾ ಅವಧಿಯಲ್ಲಿ ತರಬೇತಿ ನೀಡಲಾಗಿದೆ ಇದರಿಂದ ಈ ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಮುಖ್ಯ ಶಿಕ್ಷಕರಾದ ರಿತೇಶ್ ಶೆಟ್ಟಿ ಮಕ್ಕಳಲ್ಲಿನ ನಿರಂತರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದೀಗ ನಮ್ಮ ಶಾಲೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಖುಷಿ ತಂದಿದೆ ಎಂದಿದ್ದಾರೆ . ರಾಷ್ಟ್ರ ಮಟ್ಟದಲ್ಲಿ ಶಾಲೆಗಳಿಗೆ ನೀಡಲಾಗುವ ಪ್ರಶಸ್ತಿಗೆ ನಮ್ಮ ಶಾಲೆ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಷಯ ಶಾಲಾ ಸ್ವಚ್ಛತೆ ಮೆಚ್ಚುಗೆಗೆ ಪಾತ್ರವಾಗಿದ್ದು ಶ್ಲಾಘನೀಯ ಎನ್ನುತ್ತಾರೆ ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹರ್ಷಿಣಿ.
    ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿ ಸ್ವಚ್ಛತೆ ಬಗ್ಗೆ ಅಭಿರುಚಿ ಮೂಡಿಸಿ ಸೂಡ ಸರಕಾರಿ ಪ್ರೌಢಶಾಲೆ ಇದೀಗ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರಸ್ತುತ ಈ ಶಾಲೆಯಲ್ಲಿ 40 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅಧ್ಯಾಪಕರು ನಿರಂತರ ಪಠ್ಯದ ಜತೆಯಲ್ಲಿ ವೈಯಕ್ತಿಕ ಸ್ವಚ್ಛತೆ ಹಾಗೂ ಶಾಲೆ ಮನೆ ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ.
    ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯ ಕೊಡಮಾಡುವ ಈ ಪ್ರಶಸ್ತಿಗೆ ರಾಷ್ಟ್ರಮಟ್ಟದಲ್ಲಿ ಒಟ್ಟು 170ಶಾಲೆಗಳು ಆಯ್ಕೆಗೊಂಡಿದ್ದು, ಕರ್ನಾಟಕದಲ್ಲಿ 8 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಶಾಲೆಯಲ್ಲಿ ಸೂಡ ಸರಕಾರಿ ಪ್ರೌಢಶಾಲೆಯ ಆಯ್ಕೆ ಮಾಡಲಾಗಿದೆ. ನಗರ ಭಾಗದಲ್ಲಿ ಕಾರ್ಕಳದ ಪೆರ್ವಾಜೆ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಪರಿಸರ ಸ್ನೇಹಿ ಶಾಲೆಯಾಗಿ ಬೆಳೆಯುತ್ತಿರುವ ಗ್ರಾಮೀಣ ಭಾಗದ ಈ ಶಾಲೆಗೆ ಸಂದ ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ 1 ರಂದು ನವದಿಲ್ಲಿಯ ರಾಜಭವನದಲ್ಲಿ ನಡೆಯಲಿದೆ. ಪ್ರಶಸ್ತಿ ಪಡೆಯಲು ಶಾಲಾ ಮುಖ್ಯ ಶಿಕ್ಷಕರು ಓರ್ವ ಅಧ್ಯಾಪಕರು ಹಾಗೂ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ.ಪ್ರಶಸ್ತಿ ತಲಾ 50,000 ರೂ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply