DAKSHINA KANNADA
ಸರಕಾರಿ ಬಸ್ ಸ್ಥಗಿತ ಹಿನ್ನಲೆ, ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಿದ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಬಸ್

ಸರಕಾರಿ ಬಸ್ ಸ್ಥಗಿತ ಹಿನ್ನಲೆ, ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಿದ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಬಸ್
ಮಂಗಳೂರು,ಜನವರಿ 25: ಮಹದಾಯಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಈ ಬಂದ್ ಗೆ ಬೆಂಬಲವನ್ನು ನೀಡಿಲ್ಲ.
ಈ ಹಿನ್ನಲೆಯಲ್ಲಿ ಜಿಲ್ಲೆಯು ಎಂದಿನಂತೆ ಕಾರ್ಯಾಚರಿಸುತ್ತಿದೆ. ಆದರೆ ಸರಕಾರಿ ಬಸ್ ಗಳು ಮಾತ್ರ ಸರಕಾರದ ಆದೇಶದ ಹಿನ್ನಲೆಯಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವು ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್ ಗಳು ಪ್ರಯಾಣಿಕರನ್ನು ಲೂಟಿ ಹೊಡೆಯಲು ಪ್ರಾರಂಭಿಸಿದೆ.
ತನಗೆ ಇಷ್ಟ ಬಂದಂತೆ ನಿಲುಗಡೆಗಳನ್ನು ಬದಲಾಯಿಸುವ ಮೂಲಕ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳದಂತೆ ಮಾಡಿದೆ.
ಮಂಗಳೂರಿನಿಂದ ಪುತ್ತೂರಿಗೆ ತೆರಳುವ ಮಹೇಶ್ ಎನ್ನುವ ಬಸ್ (KA.19 C 3969) ಇಂದು ಸಹ್ಯಾದ್ರಿ ಕಾಲೇಜು ಹಾಗೂ ವಳಚಿಲ್ ಕಾಲೇಜು ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಗೆ ಪ್ರವೇಶವನ್ನೇ ನಿರಾಕರಿಸಿದೆ.
ಉಳಿದ ದಿನಗಳಲ್ಲಿ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗಾಗಿ ಕಾದು ಸಂಚರಿಸುತ್ತಿದ್ದ ಈ ಬಸ್ ಸಿಬ್ಬಂದಿಗಳು , ಸರಕಾರಿ ಬಸ್ ಸೇವೆ ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ತನ್ನ ವರ್ತನೆಯನ್ನೇ ಬದಲಾಯಿಸಿದ್ದಾರೆ.
ಪ್ರತಿದಿನ ವಿದ್ಯಾರ್ಥಿಗಳಿಗಾಗಿ ಬಕ ಪಕ್ಷಿಗಳಂತೆ ಕಾಯುತ್ತಿದ್ದ ಈ ಬಸ್ ಇಂದು ವಿದ್ಯಾರ್ಥಿಗಳನ್ನು ಬಸ್ ನ ಹತ್ತಿರಕ್ಕೂ ಸುಳಿಯಲು ಬಿಟ್ಟಿಲ್ಲ.
ಬಸ್ ಹತ್ತುವ ಮೊದಲೇ ಸಹ್ಯಾದ್ರಿ ಮತ್ತು ವಳಚಿಲ್ ನಿಲುಗಡೆಯಿಲ್ಲ ಎಂದು ಬಸ್ ಸಿಬ್ಬಂದಿ ಕೂಗುತ್ತಿರುವ ಹಿನ್ನಲೆಯಲ್ಲಿ ಕಾಲೇಜಿಗೆ ಸರಿಯಾದ ಸಮಯಕ್ಕೆ ಸೇರಲಾರದೆ ವಿದ್ಯಾರ್ಥಿಗಳು ಚಡಪಡಿಸುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು.
ಸಾರ್ವಜನಿಕ ಸೇವೆಗಾಗಿ ಇರುವ ಕಾರಣಕ್ಕಾಗಿ ಕಾನೂನು ಮೀರಿ ಸಂಚರಿಸುತ್ತಿರುವ ಈ ಕಾಂಟ್ರಾಕ್ಟ್ ಕ್ಯಾರಿಯೇಜ್ ಬಸ್ ಗಳ ಮೇಲೆ ಜನರಿಗೆ ಅನುಕಂಪವಿದ್ದರೂ, ಇಂಥ ಕೆಲವು ಬಸ್ ಗಳ ವರ್ತನೆಯಿಂದಾಗಿ ಆ ಅನುಕಂಪವೂ ಇಲ್ಲದಾಗುವ ಸ್ಥಿತಿ ನಿರ್ಮಾಣವಾಗಲಿದೆ.