Connect with us

UDUPI

ಬಾಲಕಿಯರ ಬಾಲಮಂದಿರದಲ್ಲಿಂದು ಮಕ್ಕಳ ಹಬ್ಬ- ಮಮತೆಯ ತೊಟ್ಟಿಲಿಗೆ ಚಾಲನೆ

ಬಾಲಕಿಯರ ಬಾಲಮಂದಿರದಲ್ಲಿಂದು ಮಕ್ಕಳ ಹಬ್ಬ- ಮಮತೆಯ ತೊಟ್ಟಿಲಿಗೆ ಚಾಲನೆ

ಉಡುಪಿ, ನವೆಂಬರ್ 14: ಮಕ್ಕಳ ದಿನಾಚರಣೆಯನ್ನು ಇಂದು ನಿಟ್ಟೂರಿನ ಬಾಲಕಿಯರ ಬಾಲಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಾಲಮಂದಿರದ 9 ಮಕ್ಕಳ ತಂಡ ಕೊರಗಜ್ಜ ನೃತ್ಯವನ್ನು ಅದ್ಭುತವಾಗಿ ಪ್ರದರ್ಶಿಸುವ ಮೂಲಕ ತಮ್ಮ ದಿನವನ್ನು ಅವಿಸ್ಮರಣೀಯವಾಗಿಸಿದರು.

ಗಣೇಶ್ ಬಾರಕೂರು ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ನಿನ್ನೆ ಪ್ರದರ್ಶನ ಮುಗಿಸಿದ ಮಕ್ಕಳ ತಂಡ, ಇಂದು ನಿಟ್ಟೂರಿನ ತಮ್ಮ ಬಾಲಮಂದಿರದಲ್ಲಿ ನೋಡುಗರ ಕಣ್ಮನ ಸೆಳೆಯುವ ಪ್ರತಿಭಾ ಪ್ರದರ್ಶನವನ್ನು ನೀಡಿದರು.

ಕೊರಗ ಸಮುದಾಯದಲ್ಲಿ ಹೆಣ್ಣು ಮಕ್ಕಳು ಹುಟ್ಟಿದ ವೇಳೆಯ ಸಂಭ್ರಮವನ್ನು ಈ ನೃತ್ಯ ರೂಪಕದಲ್ಲಿ ಕಾಣಬಹುದಾಗಿದ್ದು, ಇವರ ಸಾಂಪ್ರಾದಾಯಿಕ ಪರಿಕರಗಳನ್ನು ಗಣೇಶ್ ಬಾರಕೂರು ಮತ್ತು ಮೂವರ ತಂಡ ಬಾರಿಸಿದರೆ, ಮಕ್ಕಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಮುಂದಿನ ದಿನಗಳಲ್ಲಿ ಸಂಗೀತ ಪರಿಕರವನ್ನು ಬಾರಿಸಲು ಇದೇ ಮಕ್ಕಳಿಗೆ ತರಬೇತಿಯನ್ನು ನೀಡುವುದಾಗಿ ಗಣೇಶ್ ಬಾರಕೂರು ಹೇಳಿದರು.

ಬಾಲಮಂದಿರದ ಎಲ್ಲ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಇಂದಿನ ಆಚರಣೆಗಾಗಿ ನೆರವು ನೀಡಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಕೃತಜ್ಞತೆಯಿಂದ ಸ್ಮರಿಸಲಾಯಿತು. ಮಕ್ಕಳು ತಮ್ಮ ಅಮ್ಮಂದಿರ ಜೊತೆ ಕಲರ್‍ಫುಲ್ ಆಗಿ ಕಾಣಿಸಿಕೊಂಡರಲ್ಲದೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲತಾ ಅವರು, ಬಾಲಮಂದಿರದ ಆವರಣದಲ್ಲಿ ‘ಮಮತೆಯ ತೊಟ್ಟಿಲಿಗೆ’ ಚಾಲನೆ ನೀಡಿ ಹಸುಗೂಸುಗಳು ಚರಂಡಿ, ರಸ್ತೆಬದಿ, ಕಸ ಎಸೆಯುವ ತೊಟ್ಟಿಗಳಲ್ಲಿ ಲಭ್ಯವಾಗದೆ ಈ ತೊಟ್ಟಿಲಿನಲ್ಲಿ ಆಶ್ರಯ ಪಡೆದು ಬೆಳೆಯಲಿ ಎಂದು ಹಾರೈಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *