ಹಿಂದೂ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಯತ್ನ- ಜಗದೀಶ್ ಕಾರಂತ
ಪುತ್ತೂರು ಅಕ್ಟೋಬರ್ 7: ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸೈ ಅಬ್ದುಲ್ ಖಾದರ್ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಪುತ್ತೂರು ನಗರ ಪೋಲೀಸರು ಕಾರಂತರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಸೆಪ್ಟಂಬರ್ 29 ರಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಕಾರಂತರನ್ನು ಬೆಂಗಳೂರಿನಲ್ಲಿ ಬಂಧಿಸಿ ಅಂದೇ ರಾತ್ರಿ ಪುತ್ತೂರು ನ್ಯಾಯಾಧೀಶರ ಗೃಹಕಛೇರಿಗೆ ಹಾಜರುಪಡಿಸಿದ್ದರು.

ನ್ಯಾಯಾಧೀಶರು ಕಾರಂತರಿಗೆ ಅಂದು ಮಧ್ಯಂತರ ಜಾಮೀನು ನೀಡಿದ ಹಿನ್ನಲೆಯಲ್ಲಿ ಕಾರಂತ ಪರ ವಕೀಲರು ಪೂರ್ಣಾವಧಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಕಾರಂತ ಪರ ವಕೀಲರ ವಾದವನ್ನು ಮನ್ನಿಸಿದ ಪುತ್ತೂರು ನ್ಯಾಯಾಲಯ ಇಂದು ಕಾರಂತರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸತ್ಯಕ್ಕೆ ಸಂದ ಜಯ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಗದೀಶ್ ಕಾರಂತ ಇದು ಸತ್ಯಕ್ಕೆ ಸಂದ ಜಯವಾಗಿದ್ದು, ಸರಕಾರ ದುರುದ್ದೇಶ ಪೂರಕವಾಗಿ ಮಾಡಿದಂತಹ ಕೇಸು ಇದಾಗಿದೆ ಎಂದರು. ಈ ರೀತಿ ಹಿಂದೂ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಯತ್ನವನ್ನು ಪೋಲೀಸ್ ಇಲಾಖೆಯ ಮೂಲಕ ಸರಕಾರ ನಡೆಸುತ್ತಿದೆ. ಮತೀಯವಾಗಿ ಗುರುತಿಸಿಕೊಂಡಿರುವ ಗ್ರಾಮಾಂತರ ಪೋಲೀಸ್ ಠಾಣೆಯ ಎಸೈ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಜಾಮೀನಿನ ಷರತ್ತು
ಜಾಮೀನು ನೀಡಿದ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಜಗದೀಶ್ ಕಾರಂತ ಪುತ್ತೂರಿನಲ್ಲಿ ರಾಲಿ ನಡೆಸುವಂತಿಲ್ಲ, ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ ಎನ್ನುವ ಷರತ್ತಿನ ಜೊತೆಗೆ ಪ್ರತಿ ವಾರದ ಅದಿತ್ಯವಾರ ಪುತ್ತೂರು ನ್ಯಾಯಾಲಯದ ವ್ಯಾಪ್ತಿಗೆ ಬರುವ ಪೋಲೀಸ್ ಠಾಣೆಯಲ್ಲಿ ಹಾಜರಾಗಬೇಕೆಂದು ಷರತ್ತು ವಿಧಿಸಿದೆ. ಅಲ್ಲದೆ ಪುತ್ತೂರು ಬಿಟ್ಟು ಹೋಗುವಂತಿಲ್ಲ ಎನ್ನುವ ಷರತ್ತನ್ನು ಮನ್ನಿಸುವಂತೆ ಕಾರಂತರ ಪರ ವಕೀಲರ ಮನವಿಯನ್ನು ನ್ಯಾಯಾಧೀಶರು ಮನ್ನಿಸಿದ್ದಾರೆ.
ಕಾರಂತರಿಗೆ ಜಾಮೀನು ದೊರತೆ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ನ್ಯಾಯಾಲಯದ ಮುಂದೆ ಹಾಜರಿದ್ದು, ಕಾರಂತರನ್ನು ಅಭಿನಂದಿಸಿದ್ದಾರೆ.