ಸಿಡಿಲು ಬಡಿದು ಒರ್ವ ಸಾವು : ಇಬ್ಬರು ಗಂಭೀರ, ಅಪಾರ ಹಾನಿ
ಪುತ್ತೂರು,ಮಾರ್ಚ್ 19: ಸಿಡಿಲು ಬಡಿದು ಒರ್ವ ಸಾವಿಗೀಡಾಗಿ , ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಸವಣೂರಿನ ಪುಣ್ಚಪ್ಪಾಡಿ ಎಂಬಲ್ಲಿ ನಡೆದಿದೆ.
ಸಿಡಿಲು ಬಡಿದು ಸಾವಿಗೀಡಾದ ವ್ಯಕ್ತಿಯನ್ನು ಧನುಂಜಯ ಎಂದು ಗುರುತಿಸಲಾಗಿದ್ದು, ಆತನ ಅಕ್ಕ ಗೀತಾ ಹಾಗೂ ದೊಡ್ಡಪ್ಪ ಕುಂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಇಬ್ಬರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಯುಭಾರ ಕುಸಿತದ ಪರಿಣಾಮ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಇಂದೂ ಕೂಡಾ ಮಳೆಯಾಗಿದ್ದು, ಸವಣೂರು ಪರಿಸರದಲ್ಲಿ ಗಾಳಿ, ಮಳೆ ಜೊತೆಗೆ ಸಿಡಿಲಿನ ಆರ್ಭಟವೂ ಹೆಚ್ಚಾಗಿತ್ತು.
ಸುಳ್ಯದಲ್ಲೂ ವ್ಯಾಪಕ ಗಾಳಿ ಮಳೆಯಾಗಿದೆ.
ಸುಳ್ಯ ತಾಲೂಕಿನ ಬಲ್ಯ, ಪನ್ಯಾಡಿಯಲ್ಲಿ ಗಾಳಿ ಮಳೆಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.
ಹಲವೆಡೆ ತೆಂಗು, ಅಡಿಕೆ ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.
ಕುಕ್ಕೆ ಸುಬ್ರಹ್ಮಣ್ಯದ ಪರಿಸರದಲ್ಲೂ ವ್ಯಾಪಕ ಮಳೆಯಾಗಿದೆ.