
ಮಂಗಳೂರು, ಜುಲೈ.21: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ ರಹೀಂ ಉಚ್ಚಿಲ್ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಲಾಗಿದೆ. ಈ ಸಂಬಂಧ ರಹೀಂ ಉಚ್ಚಿಲ್ ಹುಬ್ಬಳ್ಳಿ ಉಪನಗರ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ರಹೀಂ ಉಚ್ಚಿಲ್ ಹುಬ್ಬಳ್ಳಿ ಸಿದ್ಧಾರೂಡ ಮಠದ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರವನ್ನು ಬಳಸಿಕೊಂಡು ವಿಲಿಯಂ ಪಿಂಟೋ ಎಂಬಾತ ತನ್ನ ವಾಲ್ ನಲ್ಲಿ ಹೆಸರಾಂತ ಸಿದ್ಧಾರೂಢ ಮಠದ ದೇವಸ್ಥಾನಕ್ಕೆ ರಹೀಂ ಉಚ್ಚಿಲ್ ಅವರನ್ನು ಪೂಜಾರಿಯಾಗಿ ನೇಮಿಸಲಾಗಿದೆ. ಇಂದು ಮುಂಜಾನೆ ನಡೆದ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಒಮ್ಮತದ ಅಭಿಪ್ರಾಯದೊಂದಿಗೆ ಶ್ರೀ ಶ್ರೀ ರಹೀಂ ಪೂಜಾರಿಯವರನ್ನು ಅನುಮೋದಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾನೆ.

ವಿಲಿಯಂ ಪಿಂಟೋ ದುಬೈನಲ್ಲಿ ಫೇಸ್ಬುಕ್ ಗೆ ಪೋಸ್ಟ್ ಮಾಡಿರುವ ಮಾಹಿತಿ ತಿಳಿದುಬಂದಿದೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕ್ರಮದ ನಿಮಿತ್ತ ಹುಬ್ಬಳ್ಳಿಯಲ್ಲಿರುವ ರಹೀಂ ಉಚ್ಚಿಲ್ ಇದೀಗ ಹುಬ್ಬಳ್ಳಿ ಉಪನಗರ ಪೋಲೀಸ್ ಠಾಣೆಯಲ್ಲಿ ವಿಲಿಯಂ ಪಿಂಟೋ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.





