ಪ್ರಥಮ ಚಿಕಿತ್ಸೆಗೆ ದುಬಾರಿ ಬಿಲ್, ಪ್ರಗತಿ ಆಸ್ಪತ್ರೆ ವಿರುದ್ಧ ಗ್ರಾಹಕರ ನ್ಯಾಯಾಲಯಕ್ಕೆ ದೂರು
ಪುತ್ತೂರು,ಮಾರ್ಚ್ 18: ಅಪಘಾತವೊಂದರಲ್ಲಿ ಗಾಯಗೊಂಡ ಗಾಯಾಳುಗಳಿಗೆ ಪ್ರಥಮ ಚಿಕಿತ್ರೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಗಾಯಾಳುಗಳಿಗೆ ದುಬಾರಿ ಬಿಲ್ ನೀಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮಾರ್ಚ್ 15 ರಂದು ವಿಟ್ಲ ಸಮೀಪದ ಚಂದಳಿಕೆ ಎಂಬಲ್ಲಿ ಬೈಕ್ ಹಾಗೂ ಪಿಕ್ ಅಪ್ ವಾಹನದ ನಡುವೆ ಡಿಕ್ಕಿಯಾಗಿತ್ತು.
ಆ ಸಮಯದಲ್ಲಿ ಬೈಕ್ ನಲ್ಲಿದ್ದ ಸವಾರ ಅನೂಪ್ ಹಾಗೂ ಸಹಸವಾರರ ಶ್ರೇಯಸ್ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ಸ್ಥಳೀಯರು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದ ಹಿನ್ನಲೆಯಲ್ಲಿ ಅಂಬ್ಯುಲೆನ್ಸ್ ಚಾಲಕ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿದ್ದರು.
ಗಾಯಗೊಂಡವರಲ್ಲಿ ಶ್ರೇಯಸ್ ಎಂಬಾತನಿಗೆ ಹೆಚ್ಚಿನ ಗಾಯಗಳಾದ ಹಿನ್ನಲೆಯಲ್ಲಿ ಆಸ್ಪತ್ರೆ ವೈದ್ಯರು ಅಪರೇಷನ್ ಮಾಡುವ ಅನಿವಾರ್ಯತೆಯನ್ನು ಗಾಯಾಳುಗಳ ಮನೆಯವರಿಗೆ ತಿಳಿಸಿದ್ದರು.
ಆದರೆ ಮನೆ ಮಂದಿ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯವುದಾಗಿ ಹೇಳಿದ್ದರು.
ಇದಕ್ಕೆ ಒಪ್ಪಿಗೆ ಸೂಚಿಸಿದ ಪ್ರಗತಿ ಆಸ್ಪತ್ರೆ ವೈದ್ಯರು ಕೇವಲ ಪ್ರಥಮ ಚಿಕಿತ್ರೆ ನೀಡಿದ್ದಕ್ಕಾಗಿ 18,500 ಸಾವಿರದ ಬಿಲ್ ನೀಡಿದ್ದಾರೆ.
ಅಲ್ಲದೆ ಶ್ರೇಯಸ್ ಜೊತೆಗೆ ಬೈಕ್ ನಲ್ಲಿದ್ದ ಅನೂಪ್ ಗೆ ಕೇವಲ ಮೊಣಕಾಲಿಗೊಂದು ಬ್ಯಾಂಡೇಜ್ ಹಾಗೂ ಕಾಲಿನ ಎರಡು ಬೆರಳಿಗೆ ಬ್ಯಾಂಡೇಜ್ ಹಾಕಿ ಚಿಕಿತ್ಸೆ ನೀಡಿದ್ದಕ್ಕಾಗಿ 6 ಸಾವಿರ ರೂಪಾಯಿ ಬಿಲ್ ನೀಡಿದ್ದಾರೆ.
ಬಡಪಾಯಿಗಳಾದ ಗಾಯಗೊಂಡವರ ಮನೆ ಮಂದಿ ಕಾಡಿ ಬೇಡಿ ಈ ಬಿಲ್ ಪಾವತಿಸಿ ಮಂಗಳೂರಿನ ಆಸ್ಪತ್ರೆಗೆ ಯುವಕರನ್ನು ದಾಖಲಿಸಿದ್ದಾರೆ.
ಈ ನಡುವೆ ಕೇವಲ ಪ್ರಥಮ ಚಿಕಿತ್ಸೆಗೆ ಈ ರೀತಿಯ ದುಬಾರಿ ಬಿಲ್ ನೀಡಿದ ಆಸ್ಪತ್ರೆ ವಿರುದ್ಧ ಗಾಯಾಳುಗಳು ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.