ಮಂಗಳೂರು,ಜುಲೈ 20: ಕಳೆದ ರಾತ್ರಿ ಸುರಿದ ಭಾರಿ ಮಳೆಯ ನಡುವೆ ದೇವಾಲಯಕ್ಕೆ ನುಗ್ಗಿದ ಕಳ್ಳರು ದೇವರ ಚಿನ್ನಾಭರಣ ಸೇರಿದಂತೆ ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರ ಹೊರವಲಯದ ಮುಲ್ಕಿ ಸಮೀಪದ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ಕಳೆದ ರಾತ್ರಿ ಕಳ್ಳರ ತಂಡ ನುಗ್ಗಿದೆ. ಭಾರಿ ಮಳೆಯ ನರುವೆ ದೇವಾಲಯದ ಮುಖ್ಯ ದ್ವಾರದ ಬೀಗ ಒಡೆದಿರುವ ಕಳ್ಳರು ದೇವರ ಗರ್ಭಗುಡಿಗೆ ನುಗ್ಗಿ ದೇವರ ಪ್ರಭಾವಳಿ, ಶಂಖ,ಚಕ್ರ,ಗಧಾ,ಹಸ್ತ ಸೇರಿದಂತೆ ಒಟ್ಟು 4.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ದೇವಾಲಯದ ಬಾಗಿಲು ತೆರೆಯಲು ಬಂದ ಸಂದರ್ಭದಲ್ಲಿ ಈ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುಲ್ಕಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
