Connect with us

    LATEST NEWS

    ಕಾವ್ಯ ಆತ್ಮಹತ್ಯೆ ಪಿಎಂ ರಿಪೋರ್ಟಿನಲ್ಲಿ ದೃಢ,ಕಾರಣ ಮಾತ್ರ ನಿಗೂಢ

    ಮಂಗಳೂರು, ಆಗಸ್ಟ್ 25 : ರಾಜ್ಯದೆಲ್ಲೆಡೆ ತೀವೃ ಕುತೂಹಲಕ್ಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ, ಕ್ರೀಡಾಪಟು ಕಾವ್ಯ ನಿಗೂಢ ಸಾವಿನ ಪ್ರಕರಣಕ್ಕೆ  ಸಂಬಂಧಿಸಿದಂತೆ ಪೋಸ್ಟ್ ಮಾರ್ಟಂ ರಿಪೋರ್ಟ್ ಪೋಲೀಸರ ಕೈ ಸೇರಿದೆ ಎನ್ನಲಾಗಿದೆ. ಈ ವರದಿ ಪ್ರಕಾರ ಕಾವ್ಯಾ ಸಾವು ಆತ್ಮಹತ್ಯೆಯಿಂದಲೇ ನಡೆದಿರುವುದು ಸಾಬೀತಾಗಿದ್ದು, ಕಾವ್ಯಾ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎನ್ನುವ ಆರೋಪಗಳಿಗೆ ಸಂಬಂಧಿಸಿದಂತಹ ಯಾವುದೇ ಪುರಾವೆಗಳೂ ಈ ರಿಪೋರ್ಟ್ ನಲ್ಲಿ ದೃಢಪಟ್ಟಿಲ್ಲ. ರಿಪೋರ್ಟ್ ಪ್ರಕಾರ ಕಾವ್ಯಾಳ ಕುತ್ತಿಗೆಯಲ್ಲಿ ನೇಣು ಹಾಕಿಕೊಂಡಿರುವ ಮಾರ್ಕ್ ಒಂದನ್ನು ಬಿಟ್ಟರೆ, ಆಕೆಯ ದೇಹದಲ್ಲಿ ಬೇರೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಆದರೆ ಕಾವ್ಯಾ ಪೋಷಕರು ಈ ಹಿಂದೆ ಹೇಳಿದಂತೆ ಕಾವ್ಯಾ ಕಾಲಿಗೆ ಉಗುರುಸುತ್ತು ಆಗಿದ್ದ ಹಿನ್ನಲೆಯಲ್ಲಿ ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಮಾಡಿದ ಮಾರ್ಕ್ ಆಕೆಯ ಕಾಲಿನಲ್ಲೇ ಇತ್ತು. ಅಲ್ಲದೆ ಆಕೆಯ ಬಲಕೈ ಯಲ್ಲಿ ದೊಡ್ಡದೊಂದು ಜಿಡ್ಡು ಕೂಡಾ ಇತ್ತೆನ್ನಲಾಗಿದೆ. ಆದರೆ ಪೋಲೀಸರ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಈ ಎರಡೂ ಗುರುತುಗಳು ಇಲ್ಲ ಎನ್ನುವ ಮಾಹಿತಿ ಖಚಿತ ಮೂಲಗಳಿಂದ ತಿಳಿದುಬಂದಿದೆ. ಹಾಸ್ಟೆಲ್ ನಲ್ಲಿ ನೇಣು ಬಿಗಿದು ಸಾವಿಗೀಡಾದ ಕಾವ್ಯಾ ಳ ಮೃತದೇಹವನ್ನು ಇಳಿಸುವ ಸಂದರ್ಭದಲ್ಲಿ ಯಾವುದೇ ವಿಡಿಯೋಗ್ರಫಿ ಮಾಡಿಲ್ಲ ಹಾಗೂ ಮೃತದೇಹದ ಪೋಸ್ಟ್ ಮಾರ್ಟಂ ಮಾಡುವಾಗಲೂ ಯಾವುದೇ ಫೋಟೋಗ್ರಫಿ ಯಾಗಲೀ, ವಿಡಿಯೋಗ್ರಫಿಯನ್ನಾಗಲೀ ಮಾಡಿಲ್ಲ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಸುಪ್ರೀಂಕೋರ್ಟ್ ನ ಆದೇಶದ ಪ್ರಕಾರ ಮೃತದೇಹದ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮಾಡುವುದು ಕಡ್ಡಾಯವಾಗಿದ್ದರೂ, ಕಾವ್ಯಾ ಮೃತದೇಹದ ವಿಷಯದಲ್ಲಿ ಈ ಲೋಪ ಯಾಕಾಗಿ ಸಂಭವಿಸಿತು ಎನ್ನುವುದು ಹಲವು ಸಂಶಯಗಳಿಗೂ ಎಡೆಮಾಡಿಕೊಟ್ಟಿದೆ. ಪೋಲೀಸ್ ವರದಿ ಹಾಗೂ ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಾವ್ಯಾ ಸಾವು ಆತ್ಮಹತ್ಯೆಯಿಂದಲೇ ನಡೆದಿರುವುದು ದೃಢಪಟ್ಟಿದ್ದರೂ, ಸಾವಿನ ಹಿಂದಿರುವ ಕಾರಣ ಮಾತ್ರ ಇನ್ನೂ ನಿಗೂಢವೇ ಆಗಿ ಉಳಿದಿದೆ. ಈ ನಡುವೆ ಕಾವ್ಯಾ ಸಾವಿನ ನಿಗೂಢತೆಯನ್ನು ಬಯಲಿಗೆಳೆಯಬೇಕು ಹಾಗೂ ಕಾವ್ಯಾ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಇದೇ ಶನಿವಾರದಂದು ಮಂಗಳೂರಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನೂ ನಡೆಸಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply