ಉಡುಪಿ ಅಗಸ್ಟ್ 2: ಆರು ವರ್ಷಗಳ ಹಿಂದೆ ಕಾರ್ಕಳ ತಾಲೂಕು ಕಾಂತಾವರ ಗ್ರಾಮದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯು ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿ ಅವರನ್ನು ಕೊಲೆಗೈದ ದಂಪತಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ ಕಾಂತಾವರ ಗ್ರಾಮದ ಬಾರಾಡಿ ಶೇಖರ ದೂಜ ಮೂಲ್ಯ ಹಾಗೂ ಅವರ ಪತ್ನಿ ಮಾಲತಿ ಮೂಲ್ಯ ಶಿಕ್ಷೆಗಳ ಪಟ್ಟವರು ಬಾರಾಡಿ ನಿವಾಸಿ ರಾಮ ಮೂಲ್ಯ ಕೊಲೆಯಾಗಿದ್ದವರು.
ಘಟನೆ ವಿವರ
2011ರ ಸೆಪ್ಟೆಂಬರ್ 16 ರಾತ್ರಿ 11 ಗಂಟೆಗೆ ಕಾಂತಾವರ ಗ್ರಾಮದ ಬಾರಾಡಿ ದರ್ಕಾಸು ಮನೆಯಲ್ಲಿ ಶೇಖರ ಮತ್ತವರ ಪತ್ನಿ ಮಾಲತಿ ಇದ್ದಾಗ ಅಲ್ಲಗೆ ಬಂದಿದ್ದ ರಾಮ ಮೂಲ್ಯ ಅವರು ಅಸಭ್ಯವಾಗಿ ವರ್ತಿಸಿದ್ದರು ಆದ್ದರಿಂದ ಕೋಪಗೊಂಡ ದಂಪತಿ ಮನೆಯ ಮುಂಭಾಗ ಪಂಚಾಂಗದಲ್ಲಿದ್ದ ಹಾರೆಯ ಹಿಡಿ ಯಿಂದ ತಲೆ ಮುಖಕ್ಕೆ ಹೊಡೆದು ಕತ್ತಿಯಿಂದ ಕಡಿದು ಕಟ್ಟಿಹಾಕಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಬಂಧನವಾಗಿತ್ತು ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಪ್ರಸಾದ್ ಎಸ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ಆಗಸ್ಟ್ 1 ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕ್ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ 5 ಸಾವಿರ ರೂಪಾಯಿ ದಂಡ ಹಾಗೂ ದಂಡದ ಮೊತ್ತವನ್ನು ನೊಂದವರಿಗೆ ಪರಿಹಾರವಾಗಿ ನೀಡಬೇಕು ಎಂದು ಪ್ರಕಟಿಸಿದ್ದಾರೆ. ಅಭಿಯೋಜನೆ ಪರ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರು ವಾದಿಸಿದ್ದರು.
02
Aug, 2017