ಪುತ್ತೂರು ಎಪ್ರಿಲ್ 21: ಕಲಾವಿದನಿಗೆ ಕಲೆಯನ್ನು ತೋರಿಸಲು ವೇದಿಕೆ ಬೇಕಷ್ಟೇ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಸಂಬಂಧ ಬೆಳೆಯುತ್ತದೆ ಎಂದಾದರೆ ನಾನು ಅದನ್ನೂ ಬಿಡೋದಿಲ್ಲ. ಒಬ್ಬ ಒಳ್ಳೆಯ ಕಲಾವಿದ ಅದನ್ನು ಬಿಡಲು ಸಾಧ್ಯವಿಲ್ಲ. ನಾನು ಇದಕ್ಕೇ ಆಂಟಿಕೊಂಡಿದ್ದೇನೆ, ಇದನ್ನು ಮಾತ್ರ ಮಾಡುತ್ತೇನೆ, ನಾನು ಪ್ಯೂರಿಸ್ಟ್, ಬೇರೆಯದನ್ನು ಮುಟ್ಟುವುದಿಲ್ಲ ಎಂದರೆ ಕಾಲವನ್ನು ಎದುರು ಮಾಡುವುದು ಬಹಳ ಕಷ್ಟವಾಗುತ್ತೆ.

ಮೌಲ್ಯ, ಮೂಲಭೂತ ನಂಬಿಕೆಗಳನ್ನು ಬಿಡದೆ ಎಷ್ಟು ಬೇಗ ಎಲ್ಲರಿಗೂ ಹೊಂದಿಕೊಳ್ಳುತ್ತೀರೋ, ಅಷ್ಟು ಉಳಿಯಬಹುದು. ಇಲ್ಲದಿದ್ದರೆ ಉಳಿಯುವುದು ಕಷ್ಟ. ಶ್ರೇಷ್ಠವಾಗಿ ಮಾಡಬೇಕು ಅಷ್ಟೇ ಅವಕಾಶಗಳನ್ನು ಬಳಸಿಕೊಂಡು ಸಂಬಂಧಗಳನ್ನು ಶ್ರೀಮಂತಗೊಳ್ಳಿಸುವುದು ಅಗತ್ಯ. ನಾನು ಒಂದು ಕ್ವಿಜ್ನಲ್ಲಿ ಸ್ಕೋರರ್ ಮಾತ್ರ ಆಗಿದ್ದೆ. ಅಲ್ಲಿ ನನ್ನ ಕೆಲಸ ಅಂಕಗಳನ್ನು ಬರೆಯುವುದು ಮಾತ್ರ ಆಗಿತ್ತು. ಆ ವ್ಯಕ್ತಿ ಕೊನೆಗೆ `ವೀಕೆಂಡ್ ವಿದ್ ರಮೇಶ್’ ಮಾಡ್ತಾನೆ ಅನ್ನುವುದು ಯಾರಿಗೆ ಗೊತ್ತಿತ್ತು. ಜೀವನ ಎಳ್ಕೊಂಡು ಹೋಗುತ್ತದೆ. ಏನು ಮಾಡುವುದಿದ್ದರೂ ಶ್ರೇಷ್ಠವಾಗಿ ಮಾಡಬೇಕು ಎನ್ನುವುದು ಮಾತ್ರ ನನ್ನ ತಲೆಯಲ್ಲಿದೆ. ಯಾವುದನ್ನೂ ಅಸಡ್ಡೆಯಿಂದ ಮಾಡುವುದೇ ಇಲ್ಲ.
ತುಳು ಸಿನೆಮಾಗಳು ಫೆಂಟಾಸ್ಟಿಕ್. ನಾನು ಒಂದೇ ಒಂದು ಸಿನೆಮಾದಲ್ಲಿ ನಟನೆ ಮಾಡಿದ್ದೇನೆ. ನೆರಲ್ನಲ್ಲಿ ಅತಿಥಿ ಪಾತ್ರ. ತುಳು ನಾಟಕಗಳು ನನಗೆ ಮೊದಲಿಂದಲೂ ಆಸಕ್ತಿ. ತುಳು ನಾಟಕಗಳಲ್ಲಿ ಇರುವ ಹ್ಯೂಮರ್ ಮೆಚ್ಚುವಂತಹುದು ಎಂದ ಅವರು ನ್ಯಾಚುರಲ್ ಡಯಲಾಗ್ ಡೆಲಿವರಿ ಇರುತ್ತದೆ. ನನ್ನ ಸಿನೆಮಾದಲ್ಲೂ ತುಳು ಕಲಾವಿದರು ನಟಿಸಿದ್ದಾರೆ. ಯಕ್ಷಗಾನದ್ದು ಇತ್ತೀಚೆಗೆ ಒಂದು ಮೇಕಪ್ ಟೆಸ್ಟ್ ಮಾಡಿದ್ದೆ. ಅದು ಬಹಳ ವೈರಲ್ ಆಗಿತ್ತು. ಯಕ್ಷಗಾನ ಕಲಾವಿದರ ಬಗ್ಗೆ ಗೌರವ ಬಂತು. ಅವರ ವಸ್ತ್ರದಲ್ಲಿ 58 ಗಂಟು ಇದೆ. ಅದನ್ನು ಅವರೇ ಹಾಕಿಕೊಳ್ಳುತ್ತಾರೆ. ಸಿನೆಮಾದಲ್ಲಿ ಕಾಸ್ಟ್ಯೂಮ್ ಮಾಡಲು 5 ಜನ ಇರುತ್ತಾರೆ. ಬಹಳ ಗೌರವ ಇದೆ ಯಕ್ಷಗಾನದ ಬಗ್ಗೆ ಎಂದು ಅಭಿಪ್ರಾಯ ಹಂಚಿಕೊಂಡರು.