DAKSHINA KANNADA
ಸುಳ್ಯ – ನಾಯಿಮರಿ ಕಚ್ಚಿದ ಪರಿಣಾಮ ರೇಬಿಸ್ ತಗುಲಿ ಮಹಿಳೆ ಸಾವು

ಸುಳ್ಯ ಮಾರ್ಚ್ 22: ನಾಯಿ ಮರಿ ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ತುತ್ತಾಗಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಮಾರ್ಚ್ 20 ರಂದು ನಡೆದಿದ್ದು, ಮಹಿಳೆಗೆ ಕಚ್ಚಿದ ನಾಯಿ ಮರಿ ನಾಪುತ್ತೆಯಾಗಿದ್ದು, ಆತಂಕಕ್ಕೆ ಕಾರಣಾಗಿದೆ.
ಸುಳ್ಯದ ಸಂಪಾಜೆಯಲ್ಲಿ ಈ ಘಟನೆ ನಡೆದಿದ್ದು. ಸಂಪಾಜೆಯ ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆಯೊಬ್ಬರಿಗೆ ಫೆಬ್ರವರಿ 7ರಂದು ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದರು. ಈ ವೇಳೆ ನಾಯಿಮರಿಯೊಂದು ಅವರಿಗೆ ಕಚ್ಚಿತ್ತು, ಆದರೆ ಮಹಿಳೆ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಹಾಗೂ ಚಿಕಿತ್ಸೆಯನ್ನೂ ಪಡೆದಿರಲಿಲ್ಲ , ಸೋಮವಾರ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆದ್ದರಿಂದ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ ತೋರುತ್ತಿದ್ದ ಆಕೆಯೊಂದಿಗೆ ವೈದ್ಯರು ಪೂರಕ ಮಾಹಿತಿ ಕೇಳಿದಾಗ ನಾಯಿ ಕಚ್ಚಿದ್ದ ಬಗ್ಗೆ ತಿಳಿಸಿದ್ದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 20ರಂದು ಮೃತಪಟ್ಟಿದ್ದಾರೆ. ಆಕೆ ರೇಬಿಸ್ ಕಾಯಿಲೆಗೆ ತುತ್ತಾಗಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಪರಿಸರದ ಹಲವರಿಗೆ ಹಾಗೂ ಮನೆಯವರಿಗೆ ಎಆರ್ವಿ ಲಸಿಕೆ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್ ತಿಳಿಸಿದ್ದಾರೆ. ಮೃತ ಮಹಿಳೆ ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.