ಕೊಯಮತ್ತೂರು ಮೇ 26: ಕೊಯಮತ್ತೂರು ಜಿಲ್ಲೆಯ ಸುಲೂರು ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೇವಲ 10 ಗಂಟೆಗಳ ಒಳಗೆ ಅಪರಾಧಿಗಳನ್ನು ಕಟಕಟೆಗೆ ತಂದು ನಿಲ್ಲಿಸಿದ ಪಶ್ಚಿಮ ವಲಯದ ಐಜಿ ರಮ್ಯಾ ಭಾರತಿ ಐಪಿಎಸ್ ಅವರು, ಪತ್ರಿಕಾಗೋಷ್ಠಿಗೂ ಮುನ್ನ ನಡೆದ ಸಣ್ಣದೊಂದು ಘಟನೆಯಿಂದಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

ಬಾಲಕಿಯ ಮೇಲಿನ ದೌರ್ಜನ್ಯದಂತಹ ಸೂಕ್ಷ್ಮ ಪ್ರಕರಣದ ಕುರಿತು ಮಾಹಿತಿ ನೀಡಲು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿ ಆರಂಭವಾಗುವ ಮುನ್ನ, ರಮ್ಯಾ ಭಾರತಿ ಅವರು ಸಹ ಅಧಿಕಾರಿಗಳೊಂದಿಗೆ ಖಾಸಗಿಯಾಗಿ ನಗುತ್ತಾ ಮಾತನಾಡುತ್ತಿದ್ದ ದೃಶ್ಯಗಳು ಲೈವ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದವು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಇಷ್ಟು ಗಂಭೀರ ಪ್ರಕರಣದಲ್ಲಿ ಅಧಿಕಾರಿಗಳ ಈ ನಡೆ ಸರಿಯಲ್ಲ ಎಂಬ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಆದರೆ, ಇದೇ ಪ್ರಕರಣದಲ್ಲಿ ಸ್ವತಃ ರಮ್ಯಾ ಭಾರತಿ ಅವರೇ ಮುಂಚೂಣಿಯಲ್ಲಿ ನಿಂತು, ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಂತೆ ಮಾಡಿದ್ದರು ಎಂಬುದು ಇಲ್ಲಿ ಗಮನಾರ್ಹ.
21ನೇ ವಯಸ್ಸಿನಲ್ಲೇ ಐಪಿಎಸ್ ಸಾಧನೆ:
ಯಾವುದೇ ಕೋಚಿಂಗ್ ಸೆಂಟರ್ಗೆ ಹೋಗದೆ, ದಿನಕ್ಕೆ 15 ಗಂಟೆಗಳ ಕಾಲ ಸ್ವಂತವಾಗಿ ಅಧ್ಯಯನ ನಡೆಸಿ ತಮ್ಮ ಮೊದಲ ಪ್ರಯತ್ನದಲ್ಲೇ, ಅಂದರೆ ಕೇವಲ 21ನೇ ವಯಸ್ಸಿನಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ ಪಾಸ್ ಮಾಡಿದ ಹೆಗ್ಗಳಿಕೆ ರಮ್ಯಾ ಭಾರತಿ ಅವರದ್ದು. ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದ ಇವರು, ಹೆತ್ತವರಂತೆ ದೇಶ ಸೇವೆ ಮಾಡಬೇಕೆಂಬ ಹಂಬಲದಿಂದ ಪೊಲೀಸ್ ಇಲಾಖೆ ಸೇರಿದ್ದರು.
ಮಹಿಳಾ ಸುರಕ್ಷತೆಯ ಸಿಂಗಂ:

ತಮಿಳುನಾಡು ಕೇಡರ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ರಮ್ಯಾ ಭಾರತಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಹಿಂದೆ ಹೊಸೂರು ಮತ್ತು ಕೊಯಮತ್ತೂರಿನಲ್ಲಿ ಮಹಿಳೆಯರು ಠಾಣೆಗೆ ಬರಲು ಹೆದರಿದಾಗ, ಇವರೇ ಖುದ್ದಾಗಿ ಅವರ ಸ್ಥಳಗಳಿಗೆ ಹೋಗಿ ನ್ಯಾಯ ಕೊಡಿಸಿದ್ದರು. ಇನ್ನು ಅಪರಾಧಿಗಳ ಅಡ್ಡೆ ಎನಿಸಿಕೊಂಡಿದ್ದ ಉತ್ತರ ಚೆನ್ನೈನ ಜಂಟಿ ಆಯುಕ್ತರಾಗಿದ್ದಾಗ, ಇವರು ರಾತ್ರಿ ವೇಳೆ ಒಂಟಿಯಾಗಿ ಸೈಕಲ್ ಗಸ್ತು (Cycle Patrolling) ತಿರುಗುವ ಮೂಲಕ ಇಡೀ ನಗರದ ಚಿತ್ರಣವನ್ನೇ ಬದಲಿಸಿದ್ದರು. ಪಶ್ಚಿಮ ವಲಯದ ಐಜಿಯಾದ ಮೇಲೂ ಮಹಿಳೆಯರಿಗಾಗಿ ವಿಶೇಷ ಹೆಲ್ಪ್ಲೈನ್ ಹಾಗೂ ವಾರಕ್ಕೊಮ್ಮೆ ಪರಿಶೀಲನಾ ಸಭೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇಷ್ಟೆಲ್ಲಾ ಸಾಧನೆ ಮತ್ತು ದಕ್ಷತೆಯ ನಡುವೆಯೂ, ಪತ್ರಿಕಾಗೋಷ್ಠಿಯ ಹಿಂದಿನ ಒಂದು ಅಚಾತುರ್ಯ ಅವರ ವಿರುದ್ಧ ಟೀಕೆಗಳು ಕೇಳಿಬರುವಂತೆ ಮಾಡಿದೆ.