LATEST NEWS
ಮೀರತ್ – ಗಂಡನನ್ನುಕೊಂದು 15 ಪೀಸ್ ಮಾಡಿ ಪ್ಲಾಸ್ಟಿಕ್ ಡ್ರಮ್ ನಲ್ಲಿ ತುಂಬಿಸಿಟ್ಟ ಹೆಂಡತಿ

ಮೀರತ್ ಮಾರ್ಚ್ 19: ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಂದು ಆತನ ದೇಹವನ್ನು 15 ಪೀಸ್ ಮಾಡಿ ಪ್ಲಾಸ್ಟಿಕ್ ಡ್ರಮ್ ನಲ್ಲಿ ಹಾಕಿ ಅದನ್ನು ಸಿಮೆಂಟ್ ನಿಂದ ಸೀಲ್ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮೃತನನ್ನು ಸೌರಭ್ ಕುಮಾರ್ ಎಂದು ಗುರುತಿಸಲಾಗಿದೆ. ಲಂಡನ್ ನಲ್ಲಿ ಉದ್ಯೋಗದಲ್ಲಿದ್ದ ಸೌರಭ್ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್ ಆಗಮಿಸಿದ್ದರು. ಈ ವೇಳೆ ಪತ್ನಿ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಸೌರಭ್ನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್ನಲ್ಲಿ ಸಿಮೆಂಟ್ ತುಂಬಿ ಸೀಲ್ ಮಾಡಲಾಗಿದೆ.
ಸೌರಭ್ ಕುಮಾರ್ ಮತ್ತು ಮುಸ್ಕಾನ್ ಒಂಬತ್ತು ವರ್ಷಗಳ ಹಿಂದೆ 2016 ರಲ್ಲಿ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಸೌರಭ್, ಮದುವೆಯ ನಂತರ ಮರ್ಚೆಂಟ್ ನೇವಿಯಲ್ಲಿ ಕೆಲಸ ಪಡೆದಿದ್ದ. ಆದರೆ ಒಂದು ವರ್ಷದ ಬಳಿಕ ಆ ಕೆಲಸವನ್ನು ತೊರೆದ ಸೌರಭ್, ಮೀರತ್ನ ದೆಹಲಿ ರಸ್ತೆಯ ಒಂದು ಪ್ಲೈವುಡ್ ಅಂಗಡಿಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದ. ಆ ನಂತರ ಲಂಡನ್ಗೆ ತೆರಳಿ ಅಲ್ಲಿನ ಒಂದು ಮಾಲ್ನಲ್ಲಿ ಮಾರಾಟ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಐದು ವರ್ಷದ ಮಗಳಿದ್ದು, ಮೀರತ್ನ ಇಂದಿರಾನಗರದಲ್ಲಿ ಓಂಪಾಲ್ ಎಂಬವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಾಡಿಗೆಗೆ ವಾಸಿಸುತ್ತಿದ್ದರು.

ಮಾರ್ಚ್ 4 ರ ರಾತ್ರಿ, ಸೌರಭ್ಗೆ ಮಾದಕ ದ್ರವ್ಯ ಕುಡಿಸಿದ ಬಳಿಕ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ ಶುಕ್ಲಾ ಆತನ ಎದೆಗೆ ಚಾಕುವಿನಿಂದ ಇರಿದು, ಗಂಟಲು ಸೀಳಿ ಕೊಲೆ ಮಾಡಿದ್ದಾರೆ. ಕೊಲೆಗೆ ಮುನ್ನ ಚಾಕುಗಳು, ಬ್ಲೇಡ್ಗಳು ಮತ್ತು ದೊಡ್ಡ ಪಾಲಿಥಿನ್ ಚೀಲಗಳನ್ನು ಖರೀದಿಸಿ ಯೋಜನೆ ಸಿದ್ಧಪಡಿಸಲಾಗಿತ್ತು. ಕೊಲೆಯಾದ ಬಳಿಕ ಶವವನ್ನು ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ, ಇಬ್ಬರೂ ಸೇರಿ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾರೆ. ಈ ಸಮಯದಲ್ಲಿ ಸ್ನಾನಗೃಹದಿಂದ ರಕ್ತ ಚರಂಡಿಗೆ ಹರಿಯುತ್ತಿತ್ತು. ಕೈಕಾಲುಗಳನ್ನು ಕತ್ತರಿಸಿ, ದೇಹದ ಭಾಗಗಳನ್ನು ಪಾಲಿಥಿನ್ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿತ್ತು.
ಮಾರ್ಚ್ 5 ರಂದು ಸಾಹಿಲ್ ಒಂದು ದೊಡ್ಡ ಪ್ಲಾಸ್ಟಿಕ್ ಡ್ರಮ್, ಒಂದು ಚೀಲ ಸಿಮೆಂಟ್ ಮತ್ತು ಮಣ್ಣು ತಂದಿದ್ದ. ದೇಹದ ತುಂಡುಗಳನ್ನು ಡ್ರಮ್ನಲ್ಲಿ ತುಂಬಿಸಿ, ನೀರು ಸುರಿದು ಸಿಮೆಂಟ್ ಮತ್ತು ಧೂಳು ಬೆರೆಸಿ ಸೀಲ್ ಮಾಡಲಾಗಿದೆ. ಡ್ರಮ್ನಲ್ಲಿ ಚಾಕು ಮತ್ತು ಬ್ಲೇಡ್ಗಳನ್ನೂ ಇರಿಸಲಾಗಿತ್ತು. ಕೊಲೆಯ ನಂತರ ಮುಸ್ಕಾನ್ ತನ್ನ ಐದು ವರ್ಷದ ಮಗಳು ಪಿಹುವನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು, ಪ್ರಿಯಕರ ಸಾಹಿಲ್ ಜೊತೆ ಶಿಮ್ಲಾಕ್ಕೆ ಪರಾರಿಯಾಗಿದ್ದಳು.
ಶಿಮ್ಲಾದಿಂದ ವಾಪಸ್ ಬಂದ ಬಳಿಕ, ಮುಸ್ಕಾನ್ ತನ್ನ ತಂದೆಗೆ ಸೌರಭ್ನ ಕೊಲೆಯ ಬಗ್ಗೆ ತಿಳಿಸಿದ್ದಾಳೆ. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿ, ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾರನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌರಭ್ನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.