BELTHANGADI
ಉಕ್ರೇನ್ ನ ಬಂಕರ್ ನಲ್ಲೇ ಬಾಕಿಯಾದ ಉಜಿರೆ ವಿದ್ಯಾರ್ಥಿನಿ

ಬೆಳ್ತಂಗಡಿ, ಮಾರ್ಚ್ 03: ಉಕ್ರೇನ್ನ ಕಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಇದ್ದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದಾರೆ.
ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರೇ ಯುದ್ಧಗ್ರಸ್ಥ ಉಕ್ರೇನ್ ನಾಡಿನಲ್ಲಿ ಪ್ರಾಣಾಪಾಯ ಎದುರಿಸುತ್ತಿರುವ ವಿದ್ಯಾರ್ಥಿನಿ. ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎಂದು ಅವರ ಮಾವ ಆಬಿದ್ ಅಲಿ ಅವರು ಮಾಹಿತಿ ನೀಡಿದ್ದಾರೆ.

ನವೀನ್ ಸಾವಿಗೆ ಕಾರಣವಾದ ರಷ್ಯಾ ನಡೆಸಿದ ಗಂಭೀರ ಸ್ಪೋಟ ಇವರು ಇರುವ ಕಟ್ಟಡಕ್ಕಿಂತ ಕೇವಲ 100 ಮೀ. ದೂರದಲ್ಲಿ ಆಗಿತ್ತಂತೆ. ಕಟ್ಟಡವೊಂದರ ತಳಹಂತದ ಬಂಕರ್ನಲ್ಲಿ ಹೀನಾ ಫಾತಿಮಾ ಸೇರಿದಂತೆ ಒಟ್ಟು 7 ಮಂದಿ ಕನ್ನಡಿಗ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸಿಕೊಂಡಿದ್ದರು.
ವಿದೇಶಾಂಗ ಇಲಾಖೆ ಅವರ ಜೊತೆ ಸಂಪರ್ಕ ಸಾಧಿಸಿದ್ದು, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಅಲ್ಲಿಂದ ಬುಧವಾರ ದಿವಸ ಅವರನ್ನು ಹೊರಬರುವಂತೆ ನಿರ್ದೇಶಿದ್ದು, ರೈಲು ಮಾರ್ಗದ ಮೂಲಕ 1000 ಕಿ.ಮೀ. ದೂರದಲ್ಲಿರುವ ಲಿವಿನ್ ಎಂಬ ಗಡಿ ಪ್ರದೇಶಕ್ಕೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ ಎಂಬ ಮಾಹಿತಿ ಇದೆ.
ಒಂದು ದಿನ ಪ್ರಯಾಣ ನಡೆಸಿ ಗಡಿ ಸೇರಿದರೆ ಅಲ್ಲಿಂದ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆ ತರುವ ಬಗ್ಗೆ ಎಂಬೆಸ್ಸಿ ಯೋಜನೆ ರೂಪಿಸಿದೆ. ಹೀನಾ ಫಾತಿಮಾ ಅವರ ಜೊತೆ ಚಿಕ್ಕಮಗಳೂರು, ಬೆಂಗಳೂರಿನ ಇತರ ಆರು ಮಂದಿ ಇದ್ದಾರೆ.