LATEST NEWS
ಉಡುಪಿ : ಸಾವಲ್ಲೂ ಸಾರ್ಥಕತೆ ಮೆರೆದ ಲೀಲಾಧರ ಶೆಟ್ಟಿ ದಂಪತಿಯ ಡೆತ್ ನೋಟಲ್ಲೂ ಸಮಾಜದ ಕಳಕಳಿ..!

ತೀವ್ರ ಮನನೊಂದು ಜೀವನದ ಕೆಟ್ಟ ಕಠಿಣ ನಿರ್ಧಾರ ಕೈಗೊಂಡ ವೇಳೆಯಲ್ಲೂ ಧೃತಿ ಕೆಡದ ಲೀಲಾಧರ ಶೆಟ್ಟಿ ಅವರು ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಉಡುಪಿ : ಉಡುಪಿ ಕಾಪು ತಾಲೂಕಿನ ಕರಂದಾಡಿಯ ಖ್ಯಾತ ಸಮಾಜ ಸೇವಕ, ರಂಗ ಕರ್ಮಿ ಲೀಲಾಧರ ಶೆಟ್ಟಿ ದಂಪತಿಯ ಅಕಾಲಿಕ ಮೃತ್ಯು ಸ್ಥಳೀಯ ಜನತೆಯನ್ನು ವಿಚಲಿತಗೊಳಿಸಿದೆ.

ಮುದ್ದಿನಿಂದ ಬೆಳೆಸಿದ್ದ ಸಾಕು ಮಗಳು ಮನೆ ಬಿಟ್ಟು ಹೋದ ಕಾರಣ ಮರ್ಯಾದೆಗೆ ಅಂಜಿ ಮನನೊಂದು ಲೀಲಾಧರ ಶೆಟ್ಟಿ ಮತ್ತು ಪತ್ನಿ ತನ್ನ ಮನೆಯಲ್ಲೇ ಜೀವಾಂತ್ಯ ಮಾಡಿಕೊಂಡಿದ್ದರು. ಸದಾ ಪರರಿಗಾಗಿ ಮಿಡಿಯುವ, ಅಜಾತ ಶತ್ರು ದಂಪತಿಯ ಸಾವಿಗೆ ಊರಿಗೆ ಊರೇ ಮರುಗಿ ರೋಧಿಸಿತ್ತು. ಆದ್ರೆ ತೀವ್ರ ಮನನೊಂದು ಜೀವನದ ಕೆಟ್ಟ ಕಠಿಣ ನಿರ್ಧಾರ ಕೈಗೊಂಡ ವೇಳೆಯಲ್ಲೂ ಧೃತಿ ಕೆಡದ ಲೀಲಾಧರ ಶೆಟ್ಟಿ ಅವರು ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಸದ್ಯ ಪೊಲೀಸರ ವಶದಲ್ಲಿರುವ ಡೆತ್ ನೋಟ್ ನಲ್ಲಿ ಅವರು ಬರೆದಿರುವ ಅಂಶಗಳು ಗಮನ ಸೆಳೆದಿದೆ. ನನ್ನ ನಿರ್ಧಾರ ನಿಮಗೆಲ್ಲರಿಗೂ ನೋವು ತಂದಿರಬಹುದು. ಆದರೆ ನನಗೆ ಪ್ರಾಣಕ್ಕಿಂತ ಮಾನ ಮುಖ್ಯ, ತನ್ನ ಉತ್ತರಕ್ರಿಯೆಯನ್ನು ಖರ್ಚು ಮಾಡದೆ ಸರಳವಾಗಿ ಮಾಡಿ. ಉಳಿದ ಹಣವನ್ನು ಬಡವರಿಗೆ ಮಕ್ಕಳಿಗೆ ನೀಡಿ ಎಂದು ಬರೆದಿದ್ದಾರೆ. ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು, ಊರಿನಲ್ಲಿ ಬಾಕಿ ಉಳಿದಿರುವ ಕೆರೆ ಹಾಗೂ ರಸ್ತೆಗಳ ಅಭಿವೃದ್ಧಿ ಕೆಲಸಗಳು ಆಗಬೇಕು. ತನ್ನ ಊರಿನ ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ದಾರ ಕೆಲಸಗಳು ಆದಷ್ಟು ಬೇಗ ಆಗಲಿ. ಇದುವೇ ನನಗೆ ನೀಡುವ ಶ್ರದ್ಧಾಂಜಲಿ ಎಂದು ಬರೆದಿರುವುದು ಸಾವಿನಲ್ಲೂ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ಲೀಲಾಧರ ಶೆಟ್ಟಿ ಅವರ ಮಾತುಗಳು ಜನರನ್ನು ದುಃಖತಪ್ತರನ್ನಾಗಿ ಮಾಡಿದ್ದು.ಶೋಕ ಸಾಗರದಲ್ಲಿ ಮುಳುಗಿಸಿದೆ.