ಉಡುಪಿ ಜನವರಿ 28: ಉಡುಪಿಯ ಕಾಪುವಿನ ವ್ಯಕ್ತಿಯೊಬ್ಬರಿಗೆ ನಕಲಿ ಪೊಲೀಸ್ ಮತ್ತು ಇಡಿ ಅಧಿಕಾರಿಗಳೆಂದು ಡಿಜಿಟಲ್ ಅರೆಸ್ಟ್ ನಲ್ಲಿಟ್ಟು ಅವರಿಂದ 40 ಲಕ್ಷ ಹಣವನ್ನು ವಸೂಲಿ ಮಾಡಿ ವಂಚನೆ ಮಾಡಿದ ಘಟನೆ ನಡೆದಿದೆ.

ಈ ಕುರಿತಂತೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಪ್ರಕಾರ ಸಂತ್ರಸ್ತ ವ್ಯಕ್ತಿಗೆ ದಿನಾಂಕ 11/01/2026 ರಂದು ಮಧ್ಯಾಹ್ನ 3:00 ಗಂಟೆಗೆ ಮೊಬೈಲ್ ನಂಬ್ರಗೆ +39019906020 ರಿಂದ ಕರೆ ಬಂದಿದ್ದು, ತಾವು Telephone Regulatory Authority of India ದಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ನಿಮ್ಮ ಹೆಸರಿನಲ್ಲಿರುವ ಮೊಬೈಲ್ ನಂಬ್ರ ದಿಂದ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಬೆದರಿಕೆ ಕರೆಗಳನ್ನು ಮಾಡುತ್ತಿರುವುದಾಗಿ ಕೊಲಾಬಾ ಪೊಲೀಸ್ ಠಾಣೆ ಮುಂಬೈಯಲ್ಲಿ ಪ್ರಕರಣ ದಾಖಲಾಗಿದ್ದು, ನೀವು ಕೂಡಲೇ ಕೊಲಾಬಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಎನ್ಓಸಿ ಪಡೆಯಬೇಕು ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಅನ್ನು 2 ಗಂಟೆಯ ಒಳಗೆ ನಿಷ್ಕ್ರೀಯಗೊಳಿಸಲಾಗುವುದು ಎಂದು ಹೇಳಿದ್ದಾರೆ. ಬಳಿಕ ಕೊಲಾಬಾ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿ ಕರೆಯನ್ನು ಬೆರೆ ನಂಬರ್ ಗೆ ವರ್ಗಾಯಿಸಿದ್ದಾರೆ. ಆ ನಂಬರ್ ನಲ್ಲಿದ್ದ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ನವರು ಎಂದು ಹೇಳಿಕೊಂಡು ಮಾತನಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಉಪಯೋಗಿಸಿ ಕೆನರಾ ಬ್ಯಾಂಕ್ ಕೊಲಾಬಾ ಮುಂಬೈಯಲ್ಲಿ ಬ್ಯಾಂಕ್ ಅಕೌಂಟ್ ತೆರೆದು 4.90 ಕೋಟಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾಗಿ ಹಾಗೂ ಈ ಸಂಬಂಧ ನರೇಶ್ ಗೋಯಲ್ ಎಂಬ ವ್ಯಕ್ತಿಯ ಅಕ್ರಮ ಹಣ ದಂಧೆ ಪ್ರಕರಣದಲ್ಲಿ ಶಾಮೀಲಾಗಿರುತ್ತದೆ. ಈ ಸಂಬಂಧ ಉಚ್ಚ ನ್ಯಾಯಾಲಯ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಿರುತ್ತದೆ ಎಂದು ತಿಳಿಸಿದ್ದಾನೆ.
ಬಳಿಕ ಆಡಿಯೋ ಕರೆಯನ್ನು ವೀಡಿಯೋ ಕರೆಗೆ ವರ್ಗಾಯಿಸಿದ್ದಾರೆ. ಈ ವೇಳೆ ಮತ್ತೊಬ್ಬ ವಿಕ್ರಮ್ ರಾಥೋಡ್ ಎಂಬ ಹೆಸರಿನ ವ್ಯಕ್ತಿಯು ಪೊಲೀಸ್ ಸಮವಸ್ತ್ರದಲ್ಲಿದ್ದು, ತಾನು ತನಿಖಾಧಿಕಾರಿಯೆಂದು ತನ್ನ ಗುರುತು ಸಂಖ್ಯೆ ಹಾಗೂ ಹೆಸರನ್ನು ಹೇಳಿಕೊಂಡು ತನಿಖೆಗೆ ಸಹಕರಿಸದಿದ್ದಲ್ಲಿ ಕೂಡಲೇ ಬಂಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ನಂತರ ಅದೇ ರೀತಿ ಪ್ರತಿದಿನ ಕರೆ ಮಾಡಿ ವಿಚಾರಣೆ ಎಂದು ವಿವಿಧ ದಾಖಲೆಗಳನ್ನು ಪಡೆದುಕೊಂಡು ಪ್ರಕರಣವನ್ನು ED ಗೆ ವರ್ಗಾಯಿಸಿ ಜಂಟಿಯಾಗಿ ತನಿಖೆ ಮಾಡುವುದಾಗಿ ತಿಳಿಸಿ ED ಡೈರೆಕ್ಟರ್ ಎಂದು ರಾಜೇಶ್ ಮಿಶ್ರಾ ಎಂಬ ಹೆಸರಿನ ವ್ಯಕ್ತಿ ಉಡುಪಿಯ ಸಂತ್ರಸ್ತ ವ್ಯಕ್ತಿಯ ಬ್ಯಾಂಕ್ ಖಾತೆ ಹಾಗೂ ಆಸ್ತಿಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ದಿನಾಂಕ 16/01/2026 ರಂದು ನಾಲ್ಕು ಲಕ್ಷ ರೂಪಾಯಿ ಹಣವನ್ನು ಹಣಕಾಸು ಇಲಾಖೆಯ ಗುಪ್ತ ಖಾತೆಗೆ fund verification ಮಾಡುವುದಕ್ಕೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ನಂತರ ದಿನಾಂಕ 19/01/2026 ರಂದು 21 ಲಕ್ಷ ದಿನಾಂಕ 23/01/2026 ರಂದು 15 ಲಕ್ಷ ಹೀಗೆ ಬೇರೆ ಬೇರೆ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.
ನಕಲಿ ಪೊಲೀಸರಿಂದ ಒಟ್ಟು ಸುಮಾರು 40 ಲಕ್ಷ ಕಳೆದುಕೊಂಡ ಮೇಲೆ ಸಂತ್ರಸ್ತರು ಸೈಬರ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.