LATEST NEWS
ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆಯಾದ ಉಡುಪಿಯ ಗ್ರಾಮೀಣ ಪ್ರದೇಶ ವಿಧ್ಯಾರ್ಥಿನಿ
ಕುಂದಾಪುರ ಮಾರ್ಚ್ 20: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಅನುಷಾ ಆಯ್ಕೆಯಾಗಿದ್ದಾಳೆ.
ಅನುಷಾ, ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಆಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ. ಮಡಾಮಕ್ಕಿ ಸಮೀಪದ ಕೃಷ್ಣ ಕುಲಾಲ ಮತ್ತು ಜಯಲಕ್ಷ್ಮೀ ಕೆ.ಕುಲಾಲ ಮಗಳಾದ ಅನುಷಾ ಪ್ರತಿಭಾವಂತೆಯಾಗಿ ಗುರುತಿಸಿಕೊಂಡಿದ್ದಾಳೆ.
ಗ್ರಾಮೀಣ ಪ್ರದೇಶದಲ್ಲಿರುವ ಕೃಷ್ಣ ಕುಲಾಲ ಗಾರೆ ಕೆಲಸಗಾರರಾಗಿದ್ದು, ತಾಯಿ ಜಯಲಕ್ಷ್ಮಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಪಾಲ್ಗೊಳ್ಳಲು ಹತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, ಅದರಲ್ಲಿ 30 ವಿದ್ಯಾರ್ಥಿಗಳು ಪ್ರಧಾನಿ ಜೊತೆ ನೇರ ಸಂವಾದ ನಡೆಸಲು ಆಯ್ಕೆ ಆಗಿದ್ದಾರೆ. ರಾಜ್ಯದಿಂದ ಇಬ್ಬರು ಆಯ್ಕೆ ಆಗಿದ್ದು, ಬೆಂಗಳೂರಿಂದ ಓರ್ವ ವಿದ್ಯಾರ್ಥಿಯಾಗಿದ್ದರೆ, ಉಡುಪಿ ಜಿಲ್ಲೆಯಿಂದ ಅನುಷಾ ಆಯ್ಕೆಯಾಗಿದ್ದಾಳೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಯರಾಜೇಂದ್ರ ಚೋಳಾನ್ ವಿಭೋದ್ ವಿಡಿಯೋ ಡೈರೆಕ್ಟರ್ ಶಾಲೆಗೆ ಆಗಮಿಸಿ ವಿದ್ಯಾರ್ಥಿನಿ ಅನುಷಾಳ ಸಂದರ್ಶನ ಹಾಗೂ ಶಾಲೆಯ ಪರಿಸರ ಕಿರು ಚಿತ್ರೀಕರಣ ನಡೆಸಿದ್ದಾರೆ.
ರಾಜ್ಯ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ವಿದ್ಯಾರ್ಥಿನಿ ಅನುಷಾಳಿಗೆ ದೂರವಾಣಿ ಕರೆ ಮಾಡಿ, ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಲು ಕರ್ನಾಟಕದಿಂದ ಅನುಷಾ ಆಯ್ಕೆಯಾದದ್ದು ತುಂಬಾ ಸಂತೋಷವಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ಒಳ್ಳೆಯ ಅವಕಾಶ. ಉತ್ತಮವಾಗಿ ಸಂದರ್ಶನ ನಡೆಸಿ ರಾಜ್ಯಕ್ಕೆ, ಶಾಲೆಗೆ ಒಳ್ಳೆಯ ಹೆಸರನ್ನು ತರುವಂತೆ ಧೈರ್ಯ ತುಂಬಿದ್ದಾರೆ. ಸಚಿವರ ಪತ್ನಿ ಸಾವಿತ್ರಿ ಅವರು ದೂರವಾಣಿ ಕರೆ ಮೂಲಕ ಮಾತನಾಡಿ, ವಿದ್ಯಾರ್ಥಿನಿಗೆ ಆತ್ಮವಿಶ್ವಾಸ ತುಂಬಿದ್ದಾರೆ.
You must be logged in to post a comment Login