KARNATAKA
ನಿಗೂಢ ಕಾರಣಕ್ಕೆ ಜೀವಾಂತ್ಯ ಮಾಡಿಕೊಂಡ ಟಿವಿ9 ಕ್ಯಾಮರಾಮೆನ್ ರವಿ ಗಿರಣಿ

ಗದಗ ಮಾರ್ಚ್ 22: ಟಿವಿ 9 ಕನ್ನಡ ನ್ಯೂಸ್ ವಾಹಿನಿಯಲ್ಲಿ ಗದಗದಲ್ಲಿ ಕ್ಯಾಮರಾಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಗಿರಣಿ ಮಾರ್ಚ್ 21 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಟಿವಿ9 ಪ್ರಾರಂಭವಾದಾಗಿನಿಂದ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಗಿರಣಿ ದಾವಣಗೆರೆ , ಮಂಗಳೂರು ಬಳಿಕ ಪ್ರಸ್ತುತ ಗದಗದಲ್ಲಿ ಕೆಲಸ ಮಾಡಿದ್ದರು. ಮಂಗಳೂರಿನಲ್ಲಿ ಅನೇಕ ವರ್ಷ ಕೆಲಸ ಮಾಡಿರುವ ರವಿ ಗಿರಣಿ ಜಿಲ್ಲೆಯಲ್ಲಿ ತಮ್ಮ ಸೌಮ್ಯ ಸ್ವಭಾವದಿಂದ ಜಿಲ್ಲೆಯಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ.

ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದ ಅವರು ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು ಕಾರಣ ಏನು ಎಂದು ತಿಳಿಸಿರಲಿಲ್ಲ. ರವಿ ಅವರ ಪತ್ನಿ ಗಂಗಾವತಿಯಲ್ಲಿ ಶಿಶು ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ತಕ್ಷಣ ಮನೆ ಸಮೀಪದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಜನರು ಬಂದು ನೋಡುವಷ್ಟರಲ್ಲಿಯೇ ರವಿ ಇಹಲೋಕ ತ್ಯಜಿಸಿದ್ದರು. ರವಿ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.