ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಪರಿಸರದಲ್ಲಿ ಇಂದು ಬುಧವಾರ ಬೆಳಗ್ಗೆ ಹುಲಿಯೊಂದು ಕಂಡುಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

ಅಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಬುಧವಾರ ಬೆಳಗ್ಗೆ ಹುಲಿ ಕಂಡುಬಂದಿದೆ ಎನ್ನಲಾಗಿದೆ. ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು ಅದು ಚಿರತೆಯದ್ದೋ ಅಥವಾ ಹುಲಿಯದ್ದೋ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.