DAKSHINA KANNADA
ದೇವರ ಮೀನು ಕಳವು, ಕಳ್ಳರಿಗೆ ಸಾರ್ವಜನಿಕರಿಂದ ಗೂಸ..

ಸುಳ್ಯ, ಜುಲೈ 26 : ಸೋಗಿನಲ್ಲಿ ಬಂದ ಅಗಂತುಕರಿಬ್ಬರು ಸುಳ್ಯದ ದೇವರ ಮೀನುಗಳ ದೇವಸ್ಥಾವೆಂದೇ ಖ್ಯಾತಿವೆತ್ತ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಮೀನುಗಳನ್ನು ಹಿಡಿದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆಂದ್ರಪ್ರದೇಶ ಮೂಲದ ಇಬ್ಬರು ದೇವಸ್ಥಾನದ ಒಳಗೆ ಬಂದು ದೇವಸ್ಥಾನದ ವಿಶೇಷತೆಯನ್ನು ಕೇಳುವ ಮೂಲಕ ದೇವಸ್ಥಾನದಲ್ಲೇ ಕೆಲವು ಸಮಯ ಕಳೆದಿದ್ದಾರೆ. ದೇವಸ್ಥಾನದಲ್ಲಿ ಪೂಜೆ ನಡೆಯುವ ಸಂದರ್ಭದಲ್ಲಿ ಅಂಗಿ ತೆಗೆದು ಒಳಗೆ ಬರುವಂತೆ ಈ ಇಬ್ಬರನ್ನು ದೇವಸ್ಥಾನದ ಸಿಬ್ಬಂದಿಗಳು ಕರೆದಾಗ ಅಂಗಿ ತೆಗೆಯಲು ನಿರಾಕರಿಸಿ ಹೊರಗೆ ನಡೆದಿದ್ದಾರೆ.

ದೇವಸ್ಥಾನದ ಸಿಬ್ಬಂದಿ ದೇವಸ್ಥಾನದ ಒಳಗೆ ಮಧ್ಯಾಹ್ನದ ಪೂಜೆಯಲ್ಲಿ ಭಾಗಿಯಾಗಿದ್ದ ಸಂದರ್ಭವನ್ನು ಬಳಸಿಕೊಂಡು ಅಗಂತುಕರಿಬ್ಬರು ದೇವಸ್ಥಾನದ ಪಕ್ಕದಲ್ಲೇ ಹರಿಯುವ ತೊರೆಯಲ್ಲಿದ್ದ ದೇವರ ಮೀನುಗಳನ್ನು ಹಿಡಿದು ಸಾಗಿಸಲು ಯತ್ನಿಸಿದ್ದಾರೆ. ಇವರ ವರ್ತನೆಯನ್ನು ಕಂಡು ಸಂಶಯಿಸಿದ ಸಾರ್ವಜನಿಕರು ಇಬ್ಬರ ಬ್ಯಾಗನ್ನು ಪರಿಶೀಲಿಸಿದಾಗ ದೇವಸ್ಥಾನದಿಂದ ಹಿಡಿದ ಮೀನುಗಳು ಪತ್ತೆಯಾಗಿದೆ.
ಆಯುರ್ವೇದ ಮದ್ದುಗಳನ್ನು ಮಾರುವಂತೆ ಕಾಣುತ್ತಿದ್ದ ಈ ವ್ಯಕ್ತಿಗಳು ಕೆಲವು ಅಧಿಕಾರಿಗಳ ಜೊತೆ ನಿಂತು ತೆಗೆಸಿಕೊಂಡ ಫೋಟೋಗಳೂ ಕಳ್ಳರ ಬ್ಯಾಗುಗಳಲ್ಲಿ ಪತ್ತೆಯಾಗಿದೆ. ಇಬ್ಬರನ್ನೂ ಹಿಡಿದು ಸುಳ್ಯ ಪೋಲೀಸರಿಗೆ ಒಪ್ಪಿಸಿದ ಸಾರ್ವಜನಿಕರು ಬಳಿಕ ಆ ಇಬ್ಬರಿಂದಲೂ ದೇವಸ್ಥಾನಕ್ಕೆ ತಪ್ಪೊಪ್ಪಿಗೆ ಹಾಕಿಸಿ ಬಿಟ್ಟಿದ್ದಾರೆ.