LATEST NEWS
ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಕಳ್ಳರು

ಉಡುಪಿ ಜುಲೈ 26: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಕಳ್ಳತನಕ್ಕೆ ಬಂದ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದ್ದು, ಕಳ್ಳತನಕ್ಕೆ ಬಂದ ಕಳ್ಳನೊಬ್ಬ ಮೂರ್ಚೆ ಹೋಗಿದ್ದು ಇದು ದೇವಿಯ ಪವಾಡ ಎಂದು ಹೇಳಲಾಗುತ್ತಿದೆ.
ಜುಲೈ 25ರ ಶುಕ್ರವಾರ ತಡರಾತ್ರಿ ಈ ಪ್ರಕರಣ ನಡೆದಿದ್ದು, ದೇವಸ್ಥಾನದ ಕಾವಲುಗಾರನ ಸಮಯಪ್ರಜ್ಞೆಯಿಂದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ಮೂಲದ ಕಳ್ಳರು ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಳ್ಳರ ಕೃತ್ಯ ಗಮನಿಸಿದ ದೇವಸ್ಥಾನದ ಕಾವಲುಗಾರ ಈ ವೇಳೆ ಬೊಬ್ಬಿಟ್ಟಾಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವಬೆದರಿಕೆಯೊಡ್ಡಿ ಪಲಾಯನ ಮಾಡಿದ್ದಾರೆ. ಕೂಡಲೇ ಕಾವಲುಗಾರ ಸ್ಥಳೀಯ ಭಕ್ತರಿಗೆ ತಿಳಿಸಿದ್ದು, ತಕ್ಷಣ ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಒಟ್ಟಾಗಿದ್ದಾರೆ.

ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಂದಿರುವುದು ಹಾಗೂ ನಂತರ ಹೋಗಿರುವುದು ತಿಳಿದು ಬಂದಿದೆ. ತಕ್ಷಣ ಸ್ಥಳೀಯರು ಹುಡುಕಾಟ ನಡೆಸಿ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರು ಓಡುತ್ತ ಸಾಗುವಾಗ ಓರ್ವ ಕಳ್ಳನಿಗೆ ಮೂರ್ಛೆ ಬಂದು ಧರೆಗುರುಳಿದಿದ್ದಾನೆ. ಮೂರ್ಛೆ ಹೋಗಿರುವ ಕಳ್ಳನ ಉಪಚರಿಸುತ್ತಿದ್ದ ಮತ್ತೊಬ್ಬ ಕಳ್ಳನು ಓಡಲು ಯತ್ನಿಸಿದರೂ ಸಿಕ್ಕಿಬಿದ್ದಿದ್ದಾನೆ.
ಮೂರ್ಛೆ ವ್ಯಾಧಿ ಉಲ್ಭಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನಿಗೆ, ಸ್ಥಳೀಯರು ಕಳ್ಳತನಕ್ಕೆ ತಂದಿದ್ದ ಕಬ್ಬಿಣದ ಸಲಕರಣೆಗಳನ್ನು ಕೈಗೆ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳೀಯರ ಸಹಕಾರದಿಂದ ಮೂರ್ಛೆ ಹೋಗಿರುವ ಕಳ್ಳನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.
ಮತ್ತೊಬ್ಬ ಕಳ್ಳನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳರು ಕೇರಳ ಮೂಲದವರೆಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ.