LATEST NEWS
ಕೂಲರ್ಗಾಗಿ ವಧು ವರನ ಕಡೆಯವರ ನಡುವೆ ಕಿರಿಕ್, ರಣರಂಗವಾಯ್ತು ಕಲ್ಯಾಣ ಮಂಟಪ

ಉತ್ತರ ಪ್ರದೇಶ, ಜೂನ್ 02 : ಮದುವೆ ಮನೆಯಲ್ಲಿ ಸಡಗರ ಸಂಭ್ರಮಕ್ಕೇನು ಕೊರತೆಯಿಲ್ಲ . ಆದರೆ ಕೆಲವೊಮ್ಮೆ ಊಟದ ವಿಚಾರವಾಗಿ, ಸಣ್ಣ ಪುಟ್ಟ ಕಾರಣವನ್ನೇ ಮುಂದಿಟ್ಟುಕೊಂಡು ವಧು ವರರ ಕಡೆಯವರು ಜಗಳವಾಡುವುದನ್ನು ನೀವು ನೋಡಿರಬಹುದು. ಆದರೆ ಇದೀಗ ಕೂಲರ್ ವಿಚಾರವಾಗಿ ವಧು ವರನ ಕಡೆಯವರ ನಡುವೆ ಜಗಳವು ಶುರುವಾಗಿದೆ. ಕೊನೆಗೆ ಈ ಜಗಳವು ಅತಿರೇಕಕ್ಕೆ ತಿರುಗಿದ್ದು ಎರಡು ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶದ ಝಾನ್ಸಿ ಯಲ್ಲಿ ನಡೆದಿದೆ ಎನ್ನಲಾಗಿದೆ.
@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಕೂಲರ್ ವಿಚಾರಕ್ಕೆ ಜಗಳವು ಶುರುವಾಗಿದ್ದು, ವಧು ವರನ ಕಡೆಯವರು ಪರಸ್ಪರ ಕುರ್ಚಿ, ಪಾತ್ರೆಗಳಿಂದ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಬಹುದು.

ಮದುವೆ ಮಂಟಪದಲ್ಲಿ ವಧು ವರನಿಗಾಗಿ ಕೂಲರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಹೀಗಿರುವಾಗ ವರನ ಕಡೆಯವರು ಈ ಕೂಲರ್ ಮುಂದೆ ಕುಳಿತು ಗಾಳಿ ಬರುವುದನ್ನು ತಡೆದಿರುವುದೇ ಈ ಜಗಳಕ್ಕೆ ಕಾರಣವಾಗಿದೆ. ಈ ಬಗ್ಗೆ ವಧುವಿನ ಕಡೆಯವರು ಪ್ರಶ್ನೆ ಮಾಡಿದ್ದು, ಬೇರೆ ಕಡೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ಹೊಡೆದಾಟ ಹಂತ ತಲುಪಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಉತ್ತರ ಭಾರತೀಯರು ಯಾವುದೇ ಅವಕಾಶವನ್ನು ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಹೆಚ್ಚಿನ ಮದುವೆಗಳು ಜಗಳದಲ್ಲೇ ಕೊನೆಗೊಳ್ಳುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಈ ರೀತಿ ಜಗಳ ಆಡುವ ಮುನ್ನ ವಧು ವರರ ತಂದೆ ತಾಯಿಯ ಬಗ್ಗೆ ಕನಿಷ್ಠ ಪಕ್ಷ ಯೋಚಿಸಬೇಕು ಎಂದಿದ್ದಾರೆ.