LATEST NEWS
ಸುರತ್ಕಲ್ : ಜನತಾಕಾಲನಿ ಸರಕಾರಿ ಶಾಲೆ ಭೂ ವಿವಾದ, ಪ್ರತಿಭಟನಾ ಧರಣಿ..!

ಸುರತ್ಕಲ್ : ದ.ಕ.ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಾನ ಕಟ್ಲ ಜನತಾಕಾಲನಿಯ ಭೂ ಕಬಳಿಕೆಯ ಸಮಗ್ರ ಹಾಗೂ ಗಂಭೀರ ತನಿಖೆಗೆ ಒತ್ತಾಯಿಸಿ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ನಡೆಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ,ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡುತ್ತಾ ಕಳೆದ 27ವರ್ಷಗಳಿಂದ ಬಡ ಮಕ್ಕಳ ಭವಿಷ್ಯಕ್ಕಾಗಿ ಸದ್ಭಳಕೆ ಆದ ಶಾಲೆ ಮತ್ತು ಆಟದ ಮೈದಾನಕ್ಕೆ ಈಗ ಏಕಏಕಿ ತನ್ನದೆಂದು ಹೇಳಿಕೊಳ್ಳುವ ವ್ಯಕ್ತಿ ಇದುವರೆಗೂ ಯಾಕೆ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಿಲ್ಲ. ಶಾಲೆಯ 1.60ಎಕ್ರೆ ಭೂಮಿಗೆ ಸಂಭಂಧಪಟ್ಟ ದಾಖಲೆಗಳು ಇದ್ದರೂ ಶಿಕ್ಷಣ ಇಲಾಖೆ ಯಾಕೆ ಶಾಲೆಯ ಭೂಮಿಯ ಪರಭಾರೆಯನ್ನು ತಡೆಯಲಾಗಲಿಲ್ಲ ಎಂದು ಅವರು ಪ್ರಶ್ನಿಸಿದರು. ಶಾಲೆಯ ಭೂಮಿಯನ್ನು ಉಳಿಸುವ ಹೋರಾಟ ತೀವ್ರಗೋಳಿಸುತ್ತೇವೆ ಎಂದರು.
ಹೋರಾಟ ಸಮಿತಿಯ ಸಹಸಂಚಾಲಕಿ ವಾರಿಜ ಅವರು ಹಿರಿಯರ ಪರಿಶ್ರಮದಿಂದಾಗಿ ಬಡವರ ಕಾಲನಿಯಲ್ಲಿ ಶಾಲೆ ನಿರ್ಮಿಸಲಾಯಿತು ಸಾವಿರಾರು ಮಕ್ಕಳಿಗೆ ವಿದ್ಯಾ ದಾನ ಮಾಡಿದ ಸರ್ವ ಧರ್ಮ ದೇಗುಲವನ್ನು ಯಾವ ಬೆಲೆ ತೆತ್ತಾದರೂ ಉಳಿಸುತ್ತೇವೆ. ಬೇಕಾದರೆ ನಮ್ಮ ಪ್ರಾಣ ತೆಗೆಯಿರಿ ಶಾಲೆಯ ಒಂದು ಇಂಚು ಭೂಮಿ ಬಿಟ್ಟು ಕೊಡುವುದಿಲ್ಲ ಎಂದರು.
ಶಾಲೆಯ ಸ್ಥಾಪಕ ಸದಸ್ಯರಾದ ಹಮ್ಮಬ್ಬ ಬದವಿದೆ, ಶಾಲಾಭಿವೃದ್ಧಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ, ಮಾಜಿ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ರಾಘವೇಂದ್ರ ಕರಂಬಾರು ಫಾರೂಕ್ ಜನತಾಕಾಲನಿ ಮಾತನಾಡಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಕೈರುನ್ನಿಸ, ಸ್ಥಳೀಯ ಮುಂದಾಳುಗಳಾದ ದಯಾನಂದ ಶೆಟ್ಟಿ, ಸಿಸಿಲಿಯ ಲೋಬೊ, ಶರೀಫ್ ಜನತಾಕಾಲನಿ, ಆಸೀಫ್, ಅಶ್ರಫ್, ಅಸ್ಕಾಫ್, ಕ್ರಿಸ್ಟಿನ್ ಮಥಾಯಸ್, ಕಿಶೋರ್ ಶೆಟ್ಟಿ, ರೋಷನ್ ಜೋಯ್ ಡಿಸೋಜಾ,ಶಬನಾ,ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಬಿಕೆ ಮಸೂದ್, ಸಾದಿಕ್ ಕಿಲ್ಪಾಡಿ, ಶೈಫರ್ ಆಲಿ, ಮೊಹಮ್ಮದ್ ಐ, ಸಲೀಮ್ ಶಾಡೋ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.
