DAKSHINA KANNADA
ಸುಳ್ಯ -ಕಾಂಗ್ರೇಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ಹೊಡೆದಾಟ…!!

ಸುಳ್ಯ, ಜುಲೈ 14: ರಾಜ್ಯ ವಿಧಾನಸಭೆ ಚುನಾವಣೆಯ ಟಿಕೆಟ್ ಘೋಷಣೆಯ ಬಳಿಕ ಸುಳ್ಯ ಕಾಂಗ್ರೇಸ್ ಘಟಕದಲ್ಲಿ ಎದ್ದಿದ್ದ ಭಿನ್ನಮತ ಇನ್ನೂ ಮುಂದುವರೆದಿದೆ. ಸೋಲಿನ ಪರಾಮರ್ಶೆ ಸಭೆಯ ಹೆಸರಲ್ಲಿ ಪ್ರಮುಖ ನಾಯಕರೇ ಹೊಡೆದಾಟಕ್ಕೆ ಮುಂದಾಗಿದ್ದಾರೆ. ಪರಾಜಿತ ಅಭ್ಯರ್ಥಿ ಜಿ. ಕೃಷ್ಣಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಭರತ್ ಮುಂಡೋಡಿ ಕಾರ್ಯಕರ್ತರ ವಿರುದ್ಧ ರೇಗಾಡಿದ್ದು ಏಕವಚನದಲ್ಲಿ ಬೈದಾಡುತ್ತಾ ಸಭೆಯಲ್ಲಿ ರಂಪಾಟ ನಡೆಸಿದ್ದಾರೆಂದು ನಂದಕುಮಾರ್ ಪರ ಇದ್ದವರು ಆರೋಪಿಸಿದ್ದಾರೆ.
ಕಡಬದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ಸಭೆ ನಡೆದಿತ್ತು. ಸೋಲಿನ ಕುರಿತು ಚರ್ಚಿಸಲು ಜಿಲ್ಲಾ ಪರಾಮರ್ಶೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ರಾಜ್ಯಸಭೆ ಸದಸ್ಯ ಬಿ.ಇಬ್ರಾಹಿಂ, ಬಂಟ್ವಾಳದ ಕೆಪಿಸಿಸಿ ಸದಸ್ಯ ಅಶ್ವಿನ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಜಿಪಂ ಸದಸ್ಯೆ ಮಮತಾ ಗಟ್ಟಿ ಸಭೆಗೆ ಬಂದಿದ್ದರು. ಸಭೆಯ ಆರಂಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಪಕ್ಷದ ಸೋಲಿನ ಬಗ್ಗೆ ಮಾತ್ರ ಅಭಿಪ್ರಾಯ ಮಂಡನೆ ಮಾಡಬೇಕೆಂದು ಹೇಳಿದರು.

ಇದೇ ವೇಳೆ, ಚುನಾವಣೆ ಸಂದರ್ಭದಲ್ಲಿ ನಂದಕುಮಾರ್ ಪರವಾಗಿದ್ದವರು ತಮ್ಮ ಅಭಿಪ್ರಾಯ ಹೇಳಲು ಮುಂದಾಗಿದ್ದಾರೆ. ಆದರೆ, ಭರತ್ ಮುಂಡೋಡಿ ಮತ್ತು ಪರಾಜಿತ ಅಭ್ಯರ್ಥಿ ಕೃಷ್ಣಪ್ಪ, ನಿಮ್ಮನ್ನು ಯಾರ್ರೀ ಸಭೆಗೆ ಬರಲು ಹೇಳಿದ್ದು, ನೀವು ಸಭೆಗೆ ಹೇಗೆ ಬಂದ್ರಿ. ನಿಮ್ಮನ್ನು ಉಚ್ಚಾಟನೆ ಮಾಡಿದ್ದೀವಲ್ಲಾ.. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ರೇಗುತ್ತಾ ಎದ್ದು ಬಂದಿದ್ದಾರೆ. ಇದಕ್ಕೆ ಬಾಲಕೃಷ್ಣ ಬಳ್ಳೇರಿ, ಗೋಕುಲದಾಸ್ ಸೇರಿದಂತೆ ವಿರುದ್ಧವಾಗಿ ಮಾತನಾಡಿದ್ದು, ನಮ್ಮನ್ನು ಯಾರೂ ಉಚ್ಚಾಟನೆ ಮಾಡಿಲ್ಲ. ಅಮಾನತು ಮಾಡಿದ್ದು ಅಷ್ಟೇ, ನಾವು ಈಗಲೂ ಕಾಂಗ್ರೆಸ್ ಕಾರ್ಯಕರ್ತರಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಶುಕ್ರವಾರದಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪರಾಮರ್ಶೆ ಸಭೆಯು ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಾಯಕರ ಕಾರ್ಯಕರ್ತರ ವಾಕ್ಸಮರ, ಕೈ, ಕೈ ಮಿಲಾಯಿಸಿಕೊಳ್ಳವ ರಣರಂಗಕ್ಕೆ ವೇದಿಕೆಯಾಯಿತು. ರಾಜ್ಯದಲ್ಲಿ ಕಾಂಗ್ರೇಸ್ ಅಭೂತಪೂರ್ವ ಗೆಲವು ಸಾಧಿಸಿದರೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಹೀನಾಯ ಸೋಲು ಅರಗಿಸಕೊಳ್ಳಲಾಗದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷ ಒದ್ದಾಡುತ್ತಿರುವಾಗ ಎರಡು ಬಣಗಳ ಮಧ್ಯೆ ಉಂಟಾದ ಬಹಿರಂಗ ಗುದ್ದಾಟ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.