FILM
ಅವರು ಬೇರೆಯವರನ್ನು ಹುಡುಕಲಿ ಎಂದು ನಾನು ಬಯಸುತ್ತಿದ್ದೇನೆ – ಬಿಗ್ ಬಾಸ್ ನಿರೂಪಣೆ ಬಗ್ಗೆ ಸುದೀಪ್ ಮಾತು
ಬೆಂಗಳೂರು ಅಗಸ್ಟ್ 31: ಕನ್ನಡದ ಬಿಗ್ ಬಾಸ್ ಸೀಸನ್ ಈ ಬಾರಿ ಸುದೀಪ್ ನಡೆಸಿಕೊಡುವುದಿಲ್ಲ ಎನ್ನವುದಕ್ಕೆ ಸ್ವತಃ ಸುದೀಪ್ ಅವರು ಸ್ಪಷ್ಟನೆ ಕೊಟ್ಟಿದ್ದು, ಅವರು ಬೇರೆಯವರನ್ನು ಹುಡುಕಲಿ ಎಂದು ನಾನು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಬಿಗ್ ಬಾಸ್ಗೆ ಡೆಡಿಕೇಟ್ ಮಾಡಿದ್ದೀನಿ. ಬಿಗ್ ಬಾಸ್ ದೊಡ್ಡ ಶ್ರಮ. ಎಲ್ಲರಿಗೂ ನಾನು ನಡೆಸಿಕೊಟ್ಟಿದ್ದೇನೆ ಅನ್ನೋದಷ್ಟೇ ಗೊತ್ತಿದೆ. ಹೇಗೆ ನಿಂತು ಇರ್ತೀನಿ ಗೊತ್ತಾ? ಮ್ಯಾಕ್ಸ್ ಸಿನಿಮಾ ರಾತ್ರಿ ಶೂಟ್ ನಡೆದಿತ್ತು. ಬೆಳಿಗ್ಗೆ 3:30 ಗಂಟೆಗೆ ಮ್ಯಾಕ್ಸ್ ಶೂಟ್ ಮುಗಿಯುತ್ತಿತ್ತು. ವಿಮಾನ ಲೇಟ್ ಆಗುತ್ತದೆ ಎನ್ನುವ ಕಾರಣಕ್ಕೆ ಚಾಟೆರ್ಡ್ ಫ್ಲೈಟ್ ಬಾಡಿಗೆಗೆ ತೆಗೆದುಕೊಂಡಿದ್ದೆ. ಅದು ನನ್ನದೇ ದುಡ್ಡಲ್ಲಿ. ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಮನೆಗೆ ಬರುತ್ತಿದ್ದೆ. ನಂತರ ಬಿಗ್ ಬಾಸ್ ಸೆಟ್ಗೆ ಹೋಗುತ್ತಿದ್ದೆ’ ಎಂದಿದ್ದಾರೆ ಅವರು.
‘ಬೆಳಿಗ್ಗೆ ಬಿಗ್ ಬಾಸ್ ಶೂಟ್ಗೆ ನಿಂತರೆ ಮಧ್ಯಾಹ್ನದವರೆಗೆ ಶೂಟ್ ಮಾಡುತ್ತಿದ್ದೆ. ಆ ಬಳಿಕ 2 ಗಂಟೆ ಗ್ಯಾಪ್. ನಂತರ ಮತ್ತೊಂದು ಎಪಿಸೋಡ್ ಶೂಟ್ ಮಾಡುತ್ತಿದ್ದೆ. ಆ ಬಳಿಕ ರಾತ್ರೋರಾತ್ರಿ ಚೆನ್ನೈಗೆ ಹೋಗುತ್ತಿದ್ದೆ. ಅಲ್ಲಿಂದ ಮಹಾಬಲಿಪುರಂಗೆ ಹೋಗುತ್ತಿದ್ದೆ. ಹೋದ ತಕ್ಷಣ ಶೂಟ್ ಶುರುವಾಗುತ್ತಿತ್ತು. ನನಗೆ ಸಿನಿಮಾಗೆ ನ್ಯಾಯ ಕೊಡಲ, ಶೋಗೆ ನ್ಯಾಯ ಕೊಡಲ ಎನಿಸುತ್ತಿತ್ತು. ಶೋನ ಎಂಜಾಯ್ ಮಾಡಿದ್ದೇನೆ, ಆಸಕ್ತಿಯೂ ಇದೆ. ಆದರೆ, ಕೆಲವೊಮ್ಮೆ ಮೂವ್ ಆನ್ ಆಗಲೇಬೇಕು. ನನಗೆ ಮಾಡೋಕೆ ಇಂಟ್ರೆಸ್ಟಿಲ್ಲ, ಅವರಿಗೆ ನಾನು ಬೇಡ ಎಂದಲ್ಲ. ಇದೆಲ್ಲ ಕಾಂಟ್ರವರ್ಸಿ. ಬಿಗ್ ಬಾಸ್ ವಿಚಾರ ಬಂದಾಗ ಅವರೇ ಹೇಳಬಹುದು’ ಎಂದಿದ್ದಾರೆ.
‘ಬೇರೇ ಕಲಾವಿದರನ್ನು ಹುಡುಕಲಾಗುತ್ತಿದೆ ಎಂಬ ಮಾತು ಇದೆಯಲ್ಲ’ ಎಂದು ಕೇಳಲಾಯಿತು. ಈ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ. ‘ಅವರು ಬೇರೆಯವರನ್ನು ಹುಡುಕಲಿ ಎಂದು ನಾನು ಬಯಸುತ್ತಿದ್ದೇನೆ’ ಎಂದಿದ್ದಾರೆ ಅವರು. ‘ಅಮ್ಮ ನಿನ್ನ ಅಡುಗೆ ಬೇಡ, ಖಾರ ಆಗುತ್ತಿದೆ ಎಂದು ಹೇಳಿದಾಗ ಅವರು ಅಡುಗೆ ಮಾಡೋದು ನಿಲ್ಲಿಸಲ್ಲ. ಕಡಿಮೆ ಖಾರ ಹಾಕಿ ಅಡುಗೆ ಮಾಡಿಕೊಡಬಹುದು’ ಎಂದಿದ್ದಾರೆ ಸುದೀಪ್.
You must be logged in to post a comment Login