LATEST NEWS
ವಿಧ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಶಬ್ದ ಮಾಲಿನ್ಯ ಕುರಿತು ದೂರು ಬಂದಲ್ಲಿ ಕಾನೂನು ಕ್ರಮ – ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಫೆಬ್ರವರಿ 13 : ಪ್ರಸ್ತುತ ಸಾಲಿನ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರಿಂದ ಶಬ್ದ ಮಾಲಿನ್ಯದ ಕುರಿತಾದ ದೂರುಗಳು ದೂರವಾಣಿ ಮೂಲಕ ಸ್ವೀಕೃತವಾಗುತ್ತಿರುತ್ತವೆ.
ಜಿಲ್ಲೆಯ ಪ್ರಜ್ಞಾವಂತ ಜನತೆ ತಮ್ಮ ತಮ್ಮ ಕಾರ್ಯಕ್ರಮಗಳಲ್ಲಿ ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮವಹಿಸುವುದು ಅಗತ್ಯವಾಗಿದ್ದು, ಈ ಸಂಬಂಧ ಸರ್ಕಾರದ ಸುತ್ತೋಲೆ ಸಂ.ಎಫ್.ಇ.ಇ. 128.ಇ.ಪಿ.ಸಿ.2022 ದಿನಾಂಕ:10-05-2022 ರಲ್ಲಿ ನೀಡಲಾದ ಮಾರ್ಗದರ್ಶನಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ಹಾಗೂ ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಿಗಧಿಪಡಿಸಿದ ಅವಧಿಯೊಳಗೆ ಸಮಾರಂಭವನ್ನು ಮುಕ್ತಾಯಗೊಳಿಸಬೇಕು. ಅಲ್ಲದೇ ವಿಪರೀತವಾಗಿ ಶಬ್ದ ಮಾಲಿನ್ಯ ಹಾಗೂ ಅಕ್ಕ ಪಕ್ಕದವರೆಗೆ ತೊಂದರೆ ಉಂಟಾಗದಂತೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಪರೀಕ್ಷೆ ತಯಾರಿಗೆ ಹಾಗೂ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಲು ಅಡಚಣೆಯಾಗದಂತೆ ಸಾರ್ವಜನಿಕರು ಸಹಕರಿಸಬೇಕು. ಇದರ ಹೊರತಾಗಿಯೂ ಶಬ್ದ ಮಾಲಿನ್ಯದ ಕುರಿತು ದೂರುಗಳು ಸ್ವೀಕೃತವಾದಲ್ಲಿ ಪರಿಸರ (ಸಂರಕ್ಷಣೆ) ಕಾಯಿದೆ 1986 ನಿಯಮ 15 ರಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
