Connect with us

KARNATAKA

ಚಿತ್ರದುರ್ಗ – ಎಚ್‌ಐವಿ ಪೀಡಿತ ಎಂದು ತಮ್ಮನನ್ನೇ ಕೊಂದ ಅಕ್ಕ-ಬಾವ ?

ಚಿತ್ರದುರ್ಗ ಜುಲೈ 28: ಅಪಘಾತವಾಗಿದ್ದ ತಮ್ಮನ ರಕ್ತ ಪರೀಕ್ಷೆ ವೇಳೆ ಆತನಿಗೆ ಎಚ್‌ಐವಿ ಖಾಯಿಲೆಯಿದೆ ಎಂದು ತಿಳಿದು ಅಕ್ಕ, ಬಾವ ಸೇರಿಕೊಂಡು ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.


ಮಲ್ಲಿಕಾರ್ಜುನ (23) ಹತ್ಯೆಯಾದ ವ್ಯಕ್ತಿ. ಈತನ ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ವಿರುದ್ದ ಕೊಲೆ ಆರೋಪ ಮಾಡಲಾಗಿದೆ. ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನನ ರಕ್ತ ಪರೀಕ್ಷೆ ನಡೆಸಿದಾಗ ಎಚ್‌ಐವಿ ಪತ್ತೆಯಾಗಿದೆ.

ಜುಲೈ 23ರಂದು ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನನ್ನು ದಾವಣಗೆರೆಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ನಡೆಸಿದ ರಕ್ತ ಪರೀಕ್ಷೆಯಲ್ಲಿ ಆತನಿಗೆ ಎಚ್‌ ಐವಿ ಇರುವುದು ಪತ್ತೆಯಾಗಿದೆ.

ನಂತರ ಓಮ್ಮಿಯಲ್ಲಿ ಮಗನನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದ್ದ ಮಗಳು ಹಾಗೂ ಅಳಿಯ ಮಂಜುನಾಥ್, ಮಾರ್ಗಮಧ್ಯೆಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಜುಲೈ 26ರಂದು ಊರಿಗೆ ಮೃತದೇಹ ತಂದು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ’ ಎಂದು ಯುವಕನ ತಂದೆ ಜಿ.ಬಿ.ನಾಗರಾಜ ದೂರಿನಲ್ಲಿ ತಿಳಿಸಿದ್ದಾರೆ.

ಮಗನ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಈ ಬಗ್ಗೆ ಅನುಮಾನಗೊಂಡು ಮಗಳು ಹಾಗೂ ಅಳಿಯನನ್ನು ವಿಚಾರಿಸಿದ್ದೆ. ನನಗೆ ಗಂಭೀರ ಕಾಯಿಲೆ ಇರುವ ವಿಷಯ ಬಹಿರಂಗವಾದರೆ ಗ್ರಾಮದಲ್ಲಿ ಕುಟುಂಬದ ಮರ್ಯಾದೆ ಹೋಗುತ್ತದೆ. ನನ್ನಿಂದ ಇತರರಿಗೂ ರೋಗ ಹರಡುತ್ತದೆ. ಹೀಗಾಗಿ ನನ್ನನ್ನು ಸಾಯಿಸಿಬಿಡಿ ಎಂದು ಆತ ಕಿರುಚುತ್ತಿದ್ದ. ಅವನ ನರಳಾಟ ನೋಡಲಾರದೆ ಓಮ್ಮಿಯಲ್ಲೇ ಉಸಿರುಗಟ್ಟಿಸಿ ಸಾಯಿಸಿದ್ದಾಗಿ ಮಗಳು ಹೇಳಿದ್ದಾಳೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಿಶಾ ಹಾಗೂ ದಾವಣಗೆರೆಯ ಶಾಮನೂರಿನ ನಿವಾಸಿ ಮಂಜುನಾಥ್ ಪರಸ್ಪರ ಪ್ರೀತಿಸುತ್ತಿದ್ದರು. ವರ್ಷದ ಹಿಂದೆ ಅಂತರ್ಜಾತಿ ವಿವಾಹ ಆಗಿದ್ದರು. ಆಕೆಯ ತಂದೆ ಆಟೊ ಮೊಬೈಲ್ ಅಂಗಡಿ ನಡೆಸುತ್ತಿದ್ದು, ಊರಿನಲ್ಲಿ ಸಾಕಷ್ಟು ಜಮೀನೂ ಇದೆ. ತಮ್ಮನನ್ನು ಸಾಯಿಸಿದರೆ ಎಲ್ಲಾ ಆಸ್ತಿ ತನಗೇ ಸಿಗುತ್ತದೆ ಎಂಬ ದುರಾಸೆಯಿಂದ ಆಕೆ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಿಶಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಪತಿ ಮಂಜುನಾಥ್ ತಲೆಮರೆಸಿಕೊಂಡಿದ್ದಾನೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *