DAKSHINA KANNADA
ಚಲಿಸುತ್ತಿದ್ದ ರೈಲಿನಲ್ಲಿ ದರೋಡೆ – ಕಳ್ಳನನ್ನು ಹಿಡಿಯುವ ಭರದಲ್ಲಿ ರೈಲಿನಿಂದ ಕೆಳಗೆ ಬಿದ್ದು ಮಹಿಳೆಗೆ ಗಾಯ
ಪುತ್ತೂರು, ಆಗಸ್ಟ್ 30: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ಅನ್ನು ದರೋಡೆ ಮಾಡಿ ಆರೋಪಿ ಪರಾರಿಯಾದ ಘಟನೆ ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಸಮೀಪ ನಡೆದಿದೆ.
ಕಬಕ ಪುತ್ತೂರು ರೈಲ್ವೇ ನಿಲ್ದಾಣದಿಂದ 1.ಕಿಮೀ ದೂರದ ಹಾರಾಡಿ, ಸಿಟಿ ಗುಡ್ಡೆ ಮಧ್ಯೆ ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ನಡೆದ ಘಟನೆ ಆ.30ರ ನಸುಕಿನ ಜಾವ 2.30ರ ಸುಮಾರಿಗೆ ನಡೆದಿದೆ. ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಕಾರವಾರ ಮೂಲದ ಅಧ್ಯಾಪಕರಾಗಿರುವ ರಮೇಶ್ ಮತ್ತು ನಿರ್ಮಲಾ ದಂಪತಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ನಗದಿದ್ದ ವ್ಯಾನಿಟಿ ಬ್ಯಾಗ್ ಕಳೆದು ಕೊಂಡವರು.
ಆ.29ರಂದು ರಾತ್ರಿ ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲು ಪುತ್ತೂರು ತಡರಾತ್ರಿ ಆ.30ರ ನಸುಕಿನ ಜಾವ 2.20ರ ಸುಮಾರಿಗೆ ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತಲುಪಿತ್ತು. 20.30ರ ಸುಮಾರಿಗೆ ರೈಲು ಕಾರವಾರಕ್ಕೆ ಹೊರಟ ವೇಳೆ ರೈಲು ಪುತ್ತೂರು ಹಾರಾಡಿ ಬ್ರಿಡ್ಜ್ ದಾಟಿ ಮುಂದೆ ಸಿಟಿ ಗುಡ್ಡೆ ತುಲುಪುತ್ತಿದ್ದಂತೆ ನಿರ್ಮಲಾ ಅವರು ಮಲಗುವ ವೇಳೆ ತಲೆಯ ಅಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ನಗದು ಇರಿಸಿದ್ದ ವ್ಯಾನಿಟಿ ಬ್ಯಾಗ್ನ್ನು ಅಪರಿಚಿತ ವ್ಯಕ್ತಿ ಎಳೆಯುತ್ತಿರುವುದು ಗಮನಿಸಿ ಗಾಭರಿಗೊಂಡು ಆ ವ್ಯಕ್ತಿಯನ್ನು ದೂಡಿದ್ದಾರೆ.
ಈ ವೇಳೆ ನಿರ್ಮಲಾ ಅವರ ಕುತ್ತಿಗೆಯಲ್ಲಿದ್ದ ವ್ಯಾನಿಟಿ ಬ್ಯಾಗ್ ಕಡಿದು ವ್ಯಾನಿಟಿ ಬ್ಯಾಗ್ನೊಂದಿಗೆ ಆತ ರೈಲು ಬೋಗಿಯಿಂದ ಹಾರಲೆತ್ನಿಸಿದ ಸಂದರ್ಭ ಮತ್ತೆ ಆತನನ್ನು ಹಿಡಿದ ಮಹಿಳೆಯು ತುರ್ತು ಸಂದರ್ಭ ರೈಲು ನಿಲ್ಲಿಸುವ ಚೈನ್ ಎಳೆದಿದ್ದಾರೆ. ರೈಲಿನ ವೇಗ ನಿಧಾನವಾಗುತ್ತಿದ್ದಂತೆ ಅಪರಿಚಿತ ವ್ಯಕ್ತಿ ರೈಲಿನಿಂದ ಹಾರಿದ್ದಾನೆ. ಇದರ ಜೊತೆಗೆ ಮಹಿಳೆಯೂ ಆಯ ತಪ್ಪಿ ರೈಲಿನಿಂದ ಹಳಿಯ ಮೇಲೆ ಬಿದ್ದಿದ್ದಾರೆ.
ವ್ಯಕ್ತಿ ಮಾತ್ರ ಕತ್ತಲೆಯ ನಡುವೆ ಪರಾರಿಯಾಗಿದ್ದ. ಇತ್ತ ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಮೇಶ್ ಮತ್ತು ನಿರ್ಮಲಾ ಅವರು ನೀಡಿದ ದೂರಿನಂತೆ ರೂ. 40ಸಾವಿರ ನಗದು ಮತ್ತು ಚಿನ್ನಾಭರ ಸೇರಿ ಒಟ್ಟು 8 ಲಕ್ಷ ಮೌಲ್ಯದ ಸೊತ್ತು ದರೋಡೆ ಮಾಡಿರುವ ಕುರಿತು ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
You must be logged in to post a comment Login