ನವದೆಹಲಿ, ಏಪ್ರಿಲ್ 18: ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ ವ್ಯವಸ್ಥೆಯ ಭದ್ರತೆಯನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗ ಮಹತ್ವದ ಹೆಜ್ಜೆ ಇರಿಸಿದೆ. ಯುಪಿಐ (UPI) ಮೂಲಕ ಅಪರಿಚಿತರಿಗೆ 10,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸುವಾಗ ಆ ಹಣ ತಕ್ಷಣವೇ ಕಡಿತವಾಗದಂತೆ ತಡೆಹಿಡಿಯುವ ನೂತನ ಪ್ರಸ್ತಾವನೆಯನ್ನು ಆರ್ಬಿಐ ಮಂಡಿಸಿದೆ.

ಆರ್ಬಿಐ ಸಿದ್ಧಪಡಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಒಬ್ಬ ಬಳಕೆದಾರ ತಾನು ಈ ಹಿಂದೆ ಎಂದೂ ಹಣ ಕಳುಹಿಸದ ವ್ಯಕ್ತಿಗೆ (New Payee) 10,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸಿದರೆ, ಆ ವಹಿವಾಟು ಪೂರ್ಣಗೊಳ್ಳಲು ಕನಿಷ್ಠ ಒಂದು ಗಂಟೆಯ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ‘ಟೈಮ್ ಬಫರ್’ ಅವಧಿಯಲ್ಲಿ ಬ್ಯಾಂಕ್ ಹಣವನ್ನು ತನ್ನಲ್ಲೇ ಹಿಡಿದಿಟ್ಟುಕೊಳ್ಳುತ್ತದೆ. ಒಂದು ವೇಳೆ ಬಳಕೆದಾರರು ಆಕಸ್ಮಿಕವಾಗಿ ಅಥವಾ ವಂಚಕರ ಒತ್ತಡಕ್ಕೆ ಮಣಿದು ಹಣ ಕಳುಹಿಸಿದ್ದರೆ, ಆ ಒಂದು ಗಂಟೆಯೊಳಗೆ ವಹಿವಾಟನ್ನು ರದ್ದುಗೊಳಿಸಲು (Cancel) ಅವಕಾಶವಿರುತ್ತದೆ.
ಈ ನಿಯಮವು ದೈನಂದಿನ ಸಣ್ಣಪುಟ್ಟ ವ್ಯವಹಾರಗಳ ಮೇಲೆ ಯಾವುದೇ ಪ್ರಭಾವ ಬೀರದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಅಂಗಡಿಗಳಲ್ಲಿನ ಕ್ಯೂಆರ್ ಕೋಡ್ ಪಾವತಿಗಳು, ಯುಟಿಲಿಟಿ ಬಿಲ್ಗಳು, ಇಎಂಐ (EMI), ಮ್ಯೂಚುವಲ್ ಫಂಡ್ ಎಸ್ಐಪಿಗಳು ಮತ್ತು ವಿಮಾ ಪ್ರೀಮಿಯಂ ಪಾವತಿಗಳು ಎಂದಿನಂತೆ ಕ್ಷಣಾರ್ಧದಲ್ಲಿ ಪೂರ್ಣಗೊಳ್ಳಲಿವೆ. ಬಳಕೆದಾರರು ತಮ್ಮ ವಿಶ್ವಾಸಾರ್ಹ ವ್ಯಕ್ತಿಗಳ ಪಟ್ಟಿಯನ್ನು ಬ್ಯಾಂಕ್ ಖಾತೆಯಲ್ಲಿ ದಾಖಲಿಸುವ ಮೂಲಕ, ಅವರಿಗೆ ಯಾವುದೇ ವಿಳಂಬವಿಲ್ಲದೆ ದೊಡ್ಡ ಮೊತ್ತವನ್ನು ವರ್ಗಾಯಿಸುವ ಸೌಲಭ್ಯವನ್ನೂ ಪಡೆಯಬಹುದಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಸುಮಾರು 22,931 ಕೋಟಿ ರೂಪಾಯಿಗಳಷ್ಟು ಮೊತ್ತದ ಡಿಜಿಟಲ್ ವಂಚನೆಗಳು ವರದಿಯಾಗಿವೆ. ವಂಚಕರು ಜನರನ್ನು ಹೆದರಿಸಿ ಅಥವಾ ಆಮಿಷವೊಡ್ಡಿ ತಕ್ಷಣವೇ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ಈ ಒಂದು ಗಂಟೆಯ ಕಾಲಾವಕಾಶವು ಗ್ರಾಹಕರಿಗೆ ಯೋಚಿಸಲು ಸಮಯ ನೀಡುವುದಲ್ಲದೆ, ವಂಚನೆಯನ್ನು ತಡೆಯಲು ಬ್ಯಾಂಕ್ಗಳಿಗೆ ತಾಂತ್ರಿಕ ಸಹಾಯವನ್ನೂ ಒದಗಿಸಲಿದೆ.
ಈ ಪ್ರಸ್ತಾವನೆಯಲ್ಲಿ ‘ಕಿಲ್ ಸ್ವಿಚ್’ (Kill Switch) ಎಂಬ ವಿಶೇಷ ಆಯ್ಕೆಯನ್ನೂ ನೀಡಲಾಗಿದೆ. ವಂಚನೆ ನಡೆಯುತ್ತಿದೆ ಎಂದು ಸಂಶಯ ಬಂದ ತಕ್ಷಣ ಬಳಕೆದಾರರು ತಮ್ಮ ಡಿಜಿಟಲ್ ವಹಿವಾಟನ್ನು ತಾವೇ ಸ್ಥಗಿತಗೊಳಿಸಬಹುದು. ಇದರೊಂದಿಗೆ ಹಿರಿಯ ನಾಗರಿಕರಿಗೆ ರಕ್ಷಣೆ ನೀಡಲು ‘Trusted Nominee’ ಅನುಮೋದನೆಯಂತಹ ಕ್ರಮಗಳ ಬಗ್ಗೆಯೂ ಆರ್ಬಿಐ ಚರ್ಚೆ ನಡೆಸುತ್ತಿದೆ.
ಸಾರ್ವಜನಿಕರು ಮತ್ತು ಹಣಕಾಸು ತಜ್ಞರು ಈ ಪ್ರಸ್ತಾವನೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಮೇ 8, 2026 ರವರೆಗೆ ಕಾಲಾವಕಾಶ ನೀಡಲಾಗಿದ್ದು, ತದನಂತರ ಅಂತಿಮ ಮಾರ್ಗಸೂಚಿಗಳು ಜಾರಿಗೆ ಬರಲಿವೆ.