ಮಂಗಳೂರು ಅಗಸ್ಟ್ 01: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಮಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ರಾಜಾಜಿ ಪಾರ್ಕ್ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, “ಕಾಂಗ್ರೆಸ್ನಲ್ಲಿ ಜನಸೇವೆ ಮಾಡಿದವರಿಗೆ ಗೌರವ ಸಿಕ್ಕರೆ, ಬಿಜೆಪಿಯಲ್ಲಿ ದ್ವೇಷ ಭಾಷಣ ಮಾಡುವವರಿಗೆ ಮಣೆ ಹಾಕಲಾಗುತ್ತದೆ. ಈ ಕಾರಣಕ್ಕಾಗಿಯೇ ಯಶ್ಪಾಲ್ ಸುವರ್ಣರಂತಹ ತಿಳಿಗೇಡಿಗಳಿಗೆ ಟಿಕೆಟ್ ಸಿಗುತ್ತದೆ. ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಯಶ್ಪಾಲ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಶಾಸಕತ್ವ ರದ್ದುಪಡಿಸಬೇಕು,” ಎಂದು ಆಗ್ರಹಿಸಿದರು. ಅಲ್ಲದೆ, ನೀಟ್ (NEET) ಪರೀಕ್ಷೆ ಅಕ್ರಮ ವಿರೋಧಿಸಿ ಹೋರಾಡಿದ ವಿದ್ಯಾರ್ಥಿಗಳನ್ನು ಬೆಂಬಲಿಸದವರೇ ನಿಜವಾದ ದೇಶದ್ರೋಹಿಗಳು ಎಂದರು.
ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗಡೆ ಮಾತನಾಡಿ, “ಸೋನಿಯಾ ಗಾಂಧಿ ಹಾಗೂ ಅನೇಕ ಮಹಿಳಾ ಹೋರಾಟಗಾರರ ಚಾರಿತ್ರ್ಯ ಹರಣ ನಡೆದಾಗ ಮೌನ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ತಮ್ಮ ತಾಯಿಯನ್ನು ಟೀಕಿಸಿದ್ದಕ್ಕೆ ನಡುರಾತ್ರಿ ವೀಡಿಯೊ ಮಾಡಿ ನೋವು ತೋಡಿಕೊಳ್ಳುತ್ತಾರೆ. ನಿಮ್ಮ ಪಕ್ಷದವರು ಇತರ ಮಹಿಳೆಯರನ್ನು ಟೀಕಿಸಿದಾಗ ವೀಡಿಯೊ ಮಾಡಬೇಕು ಎಂದು ಅನಿಸಿರಲಿಲ್ಲವೇ?” ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.