LATEST NEWS
ಪ್ರಯಾಣಿಕರ ಗಮನಕ್ಕೆ – ಖಾಯಂ ಆದ ಮಂಗಳೂರು – ವಿಜಯಪುರ ಎಕ್ಸ್ ಪ್ರೇಸ್ ರೈಲು

ಮಂಗಳೂರು ಜೂನ್ 28: ಕರಾವಳಿಯಿಂದ ಬಯಲು ಸೀಮೆ ಸಂಪರ್ಕಿಸುವ ಮಂಗಳೂರು ವಿಜಯಪುರ ವಿಶೇಷ ರೈಲು ಇನ್ನು ಮುಂದೆ ಖಾಯಂ ಆಗಿ ಸಂಚರಿಸಲಿದೆ. ಈ ಕುರಿತಂತೆ ಸಂತಸದ ಸುದ್ದಿಯನ್ನು ಸಂಸದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಕರಾವಳಿ ಹಾಗೂ ಬಯಲು ಸೀಮೆ ಜನರ ಬಹುದೊಡ್ಡ ಕನಸು ನನಸಾದಂತಾಗಿದೆ.
ಕರಾವಳಿಯಿಂದ ಬಯಲು ಸೀಮೆ ಸಂಪರ್ಕಿಸಲು ಇರುವ ಒಂದೇ ರೈಲು ಮಂಗಳೂರು ವಿಜಯಪುರ ರೈಲು, ಅತೀ ಹೆಚ್ಚು ಪ್ರಯಾಣಿಕರು ಸಂಚರಿಸುವ ರೈಲು ವಿಶೇಷ ರೈಲು ಎಂದು ತಾತ್ಕಾಲಿಕವಾಗಿ ಐದು ವರ್ಷಗಳ ಹಿಂದೆ ಪ್ರಾರಂಭಿಸಲಾಗಿತ್ತು, ವಿಶೇಷ ರೈಲು ಯಾವಾಗ ಬೇಕಾದರೂ ರೈಲ್ವೆ ಇಲಾಖೆ ರದ್ದು ಮಾಡುವ ಅವಕಾಶವಿತ್ತು. ಈ ಹಿನ್ನಲೆ ರೈಲು ಪ್ರಯಾಣಿಕರು ಈ ರೈಲನ್ನು ಖಾಯಂ ಗೊಳಿಸಬೇಕೆಂದು ಆಗ್ರಹಿಸುತ್ತಲೆ ಬಂದಿದ್ದರು.

ಇದೀಗ ದಕ್ಷಿಣಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಅವರ ಮುತುವರ್ಜಿಯಿಂದ ಈ ರೈಲು ಖಾಯಂ ಆಗಿದೆ. ಇನ್ನು ಈ ರೈಲು ವಿಜಯಪುರದಿಂದ ಮಂಗಳೂರು ಸೆಂಟ್ರಲ್ಗೆ ಚಲಿಸುವ ರೈಲು ಸಂಖ್ಯೆ 17377, ಮಧ್ಯಾಹ್ನ 3:00 ಗಂಟೆಗೆ ವಿಜಯಪುರದಿಂದ ಹೊರಟು ಬೆಳಿಗ್ಗೆ 9:50 ಕ್ಕೆ ಮಂಗಳೂರು ಸೆಂಟ್ರಲ್ಗೆ ಆಗಮಿಸುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ನಿಂದ ಸಂಜೆ 4:45 ಕ್ಕೆ ಹೊರಟು ಬೆಳಿಗ್ಗೆ 11:15 ಕ್ಕೆ ವಿಜಯಪುರ ತಲುಪುತ್ತದೆ.
ಈ ಕ್ರಮವು ಎರಡೂ ನಗರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಗಮನಾರ್ಹ ಪರಿಹಾರವನ್ನು ತರುತ್ತದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಈ ಕ್ರಮವು ಮಂಗಳೂರಿನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಉತ್ತರ ಕರ್ನಾಟಕದ ರೋಗಿಗಳು, ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ನಿಯಮಿತ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ.
ಇದನ್ನು ಸಾಧ್ಯವಾಗಿಸುವಲ್ಲಿ ಬೆಂಬಲ ನೀಡಿದ ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೃತಜ್ಞತೆ ಸಲ್ಲಿಸಿದರು.