DAKSHINA KANNADA
ಶೀಘ್ರದಲ್ಲೇ ಪುತ್ತೂರು ಮಂಗಳೂರು ನಡುವೆ ನಾನ್ ಸ್ಟಾಪ್ ಕೆಎಸ್ ಆರ್ ಟಿಸಿ ಬಸ್ ಸಂಚಾರ

ಪುತ್ತೂರು ಜೂನ್ 25: ಪುತ್ತೂರು ಮತ್ತು ಮಂಗಳೂರು ನಡುವೆ ನಾನ್ ಸ್ಟಾಪ್ ಕೆಎಸ್ಆರ್ ಟಿಸಿ ಬಸ್ ಸಂಚಾರ ಪ್ರಾರಂಭಿಸಿಲು ಕೆಎಸ್ಆರ್ ಟಿಸಿ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಶಾಸಕ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಎಸ್ಆರ್ಟಿಸಿ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಪುತ್ತೂರಿನಿಂದ ನೇರವಾಗಿ ಮಂಗಳೂರಿಗೆ ತೆರಳುವ ಮತ್ತು ಮಂಗಳೂರಿನಿಂದ ನೇರವಾಗಿ ಪುತ್ತೂರಿಗೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಪುತ್ತೂರು – ಸ್ಟೇಟ್ಬ್ಯಾಂಕ್ ನಾನ್ಸ್ಟಾಪ್ ಬಸ್ಗಳನ್ನು ಶೀಘ್ರದಲ್ಲೇ ಓಡಿಸಲಾಗುತ್ತದೆ. ಆರಂಭದಲ್ಲಿ 6 ಬಸ್ಗಳು ಈ ಸೇವೆಗೆ ಇಳಿಯಲಿವೆ. ಇವು ಪುತ್ತೂರು ಬಿಟ್ಟ ಬಳಿಕ ಮಂಗಳೂರಿನಲ್ಲಿ ಮಾತ್ರ ನಿಲ್ಲಲಿದೆ. ಇದರಿಂದ ಒಂದು ಗಂಟೆಯಲ್ಲಿ ಮಂಗಳೂರು ತಲುಪಲು ಸಾಧ್ಯ ಎಂದು ಸಭೆಯಲ್ಲಿ ತಿಳಿಸಲಾಯಿತು.

ಮಂಗಳೂರಿನಿಂದ ಬಂಟ್ವಾಳ- ಕಲ್ಲಡ್ಕ- ವಿಟ್ಲ- ಪುತ್ತೂರು -ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಅಂಬಾರಿ ಉತ್ಸವ ಹವಾ ನಿಯಂತ್ರಿತ ಬಸ್ ಸಂಚಾರ ನಡೆಸಲಿದೆ. ವಿಟ್ಲ ಭಾಗದ ಪ್ರಯಾಣಿಕರ ಬೇಡಿಕೆಯಂತೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಸಭೆಯಲ್ಲಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಆಮಲಿಂಗಯ್ಯ ಹೊಸ ಪೂಜಾರಿ, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಜೈಶಾಂತ್, ಡಿಪೋ ಮ್ಯಾನೆಜರ್ ಸುಬ್ರಹ್ಮಣ್ಯ ಪ್ರಸಾದ ಉಪಸ್ಥಿತರಿದ್ದರು.