DAKSHINA KANNADA
ಪುತ್ತೂರಿನ ಒಳಚರಂಡಿ ಘಟಕ ಬಲಿಕೊಡಲು ಬಿಜೆಪಿಯೊಂದಿಗೆ ಕಾಂಗ್ರೆಸ್ ನ ದುಷ್ಟಕೂಟಗಳೂ ಸಾಥ್ – ಪುತ್ತೂರು ನಗರ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಆಲಿ ಆರೋಪ

ಪುತ್ತೂರು ಎಪ್ರಿಲ್ 18: ಓರ್ವ ರಿಯಲ್ ಎಸ್ಟೇಟ್ ಉದ್ಯಮಿಯ ಹಿತಕ್ಕಾಗಿ ಪುತ್ತೂರು ನಗರದ ಒಳಚರಂಡಿ ಯೋಜನೆಯನ್ನು ಬಲಿಕೊಡಲಾಗುತ್ತಿದ್ದು, ಈ ಸಂಚಿನ ಹಿಂದೆ ಕಾಂಗ್ರೇಸ್ ನ ಕೆಲವು ದುಷ್ಟಕೂಟಗಳೂ ಸೇರಿಕೊಂಡಿದೆ ಎಂದು ಪುತ್ತೂರು ನಗರ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಆಲಿ ಆರೋಪಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಮ್ಮದ್ ಆಲಿ ಪುತ್ತೂರು ನಗರದ ಬಹುದೊಡ್ಡ ಸಮಸ್ಯೆಯಾಗಿರುವ ಅಸಮರ್ಪಕ ತ್ಯಾಜ್ಯ ನೀರಿನ ನಿರ್ವಹಣೆಯಾಗಿದ್ದು, ಕಳೆದ ಹಲವು ವರ್ಷಗಳಿಂದ ಒಳಚರಂಡಿ ಘಟಕಕ್ಕಾಗಿ ನಾನು ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಇದೀಗ ಕೇಂದ್ರದ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ರಾಜ್ಯ ಸರಕಾರದ ಸಹಯೋಗದಲ್ಲಿ ಪುತ್ತೂರು ನಗರಕ್ಕೆ ಒಳ ಚರಂಡಿ ಯೋಜನೆಗಾಗಿ 19 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಒಳಚರಂಡಿ ಘಟಕವನ್ನು ಸ್ಥಾಪಿಸಲು ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ನಗರಸಭೆ ಊಗಾಗಲೇ 5.50 ಎಕ್ರೆ ಜಾಗವನ್ನು ಮೀಸಲಿಟ್ಟಿದೆ. ಆದರೆ ಇದೀಗ ಈ ಜಾಗಕ್ಕೆ ಸೇರಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಕುಮಾರ್ ಪ್ರಭು ಎಂಬವರು ಲೇ ಔಟ್ ಮಾಡಲು ಹೊರಟಿದ್ದು, ಒಳಚರಂಡಿ ಘಟಕಕ್ಕೆ ಮೀಸಲಿಟ್ಟ ಜಾಗವನ್ನೂ ಅತಿಕ್ರಮಿಸಿಕೊಂಡಿದ್ದಾರೆ.

ಅಲ್ಲದೆ ನಗರಸಭೆಯ ರಸ್ತೆಯನ್ನೂ ಮುಚ್ಚಿ ಅಕ್ರಮ ಎಸಗಲಾಗಿದೆ. ಈ ಬಗ್ಗೆ ನಗರಸಭೆ ಕಮಿಷನರ್ ಪೋಲೀಸರಿಗೆ ದೂರನ್ನೂ ನೀಡಿದ್ದಾರೆ. ಆದರೆ ನಗರ ಸಭೆಯಿಂದ ರಸ್ತೆ ತಡೆಯನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ನಗರಸಭೆಯ ಬಿಜೆಪಿ ಆಡಳಿತ ಮತ್ತು ಕಾಂಗ್ರೆಸ್ ನ ಕೆಲವು ದುಷ್ಟಕೂಟಗಳು ಈ ರಿಯಲ್ ಎಸ್ಟೇಟ್ ಉದ್ಯಮಿಯ ಜೊತೆ ಸೇರಿಕೊಂಡು ಪುತ್ತೂರಿನ ಒಳಚರಂಡಿ ಘಟಕವನ್ನೇ ಬಲಿಕೊಡಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2 Comments