ಮಂಗಳೂರು ಸೆಪ್ಟೆಂಬರ್ 09: ಕಾನೂನು ನೆಪದಲ್ಲಿ ಈ ನೆಲದ ಸಂಸ್ಕೃತಿಯಾದ ಯಕ್ಷಗಾನ, ನಾಟಕ ಪ್ರದರ್ಶನಕ್ಕೆ ಅವಕಾಶ ನೀಡದೇ ಇದ್ದರೆ ನಾವು ಸುಮ್ಮನಿರಲ್ಲ. ಒಂದೆರಡು ದಿನದಲ್ಲಿ ಸಂಸದರ ನೇತೃತ್ವದಲ್ಲಿ ಜಿಲ್ಲಾಡಳಿತದ ಜೊತೆಗೆ ಮಾತುಕತೆ ಏರ್ಪಡಿಸುತ್ತೇವೆ. ಮಾತುಕತೆಗೆ ಬಗ್ಗದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತೇವೆ, ನಾವು ನಮ್ಮ ಸ್ಥಾನವನ್ನಾದ್ರೂ ಬಿಟ್ಟೇವು, ಸಂಪ್ರದಾಯಕ್ಕೆ ಧಕ್ಕೆ ತರಲು ಬಿಡಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಗುಡುಗಿದ್ದಾರೆ.


ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಿಲ್ಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾನೂನು ನೆಪದಲ್ಲಿ ತಡೆಯೊಡ್ಡುತ್ತಿರುವುದರ ವಿರುದ್ದ ನಡೆದ ಬೃಹತ್ ಜನಾಗ್ರಹಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳಿಗೆ ಡೆಸಿಬಲ್ ಲೆಕ್ಕ ಹಾಕುವುದು ಹೇಗೆ ಅಂತ ಗೊತ್ತಿಲ್ಲ. ಮೊಬೈಲ್ ಆಪ್ ಹಿಡಿದು ಬರುತ್ತಾರೆ ಅವರು , ನಮ್ಮಲ್ಲಿ ಯಕ್ಷಗಾನ, ನಾಟಕದ ಧ್ವನಿವರ್ಧಕ ಅಲ್ಲಿ ಸೇರುವ ಜನರಿಗಿಂತ ಹೆಚ್ಚಿರುತ್ತದೆಯೇ ಎಂದು ಲೆಕ್ಕ ಹಾಕಬೇಕು. ಕಾನೂನು ಏನೇ ಇರಲಿ, ನಮ್ಮ ಸಂಸ್ಕೃತಿಯ ಮೇಲೆ ಸವಾರಿ ಮಾಡುವ ಕಾನೂನು ನಮಗೆ ಬೇಡ. ಯಾವುದೇ ರಾಜಕೀಯ ಇಲ್ಲದೆ ಎಲ್ಲರನ್ನೂ ಬೆಂಗಳೂರಿಗೂ ಕರೆದೊಯ್ಯುತ್ತೇವೆ, ಒಟ್ಟಿಗಿದ್ದರೆ ಜೊತೆಗೆ, ಇಲ್ಲದಿದ್ದರೆ ತುಳಿದು ಅನ್ನುವ ಹಾಗೆ ಅಧಿಕಾರಿಗಳ ಜೊತೆಗೆ ಕಲಾವಿದರು ಮತ್ತು ಎಲ್ಲರನ್ನೂ ಒಳಗೊಂಡ ಸಭೆಯನ್ನು ಏರ್ಪಡಿಸುತ್ತೇವೆ. ಆನಂತರವೂ ಕೇಳದಿದ್ದರೆ ನಾವು ನಮ್ಮ ದಾರಿಯನ್ನು ಹುಡುಕಬೇಕಾಗುತ್ತದೆ ಎಂದು ಹೇಳಿದರು.


ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ಸುಪ್ರೀಂಕೋರ್ಟ್ ಕಾನೂನೂ 25 ವರ್ಷಗಳಿಂದ ಇದೆ. ಈ ಹಿಂದೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಇದೀಗ ಏಕಾಏಕಿ ಧಾರ್ಮಿಕ ಚೌಕಟ್ಟಿಗೆ ಸವಾಲೆಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ನಿರ್ಬಂಧದಿಂದ ಕಲೆಯನ್ನು ನಂಬಿದವರ ಜೀವನ ಅಲ್ಲೋಲ ಕಲ್ಲೊಲವಾಗುತ್ತಿದೆ. ಅನೇಕ ಕುಟುಂಬ ಬೀದಿ ಪಾಲಾಗುತ್ತಿದೆ. ಇದರ ಸಂಪೂರ್ಣ ಜವಬ್ದಾರಿಯನ್ನು ಸರಕಾರದ ಹೊರಬೇಕಾಗುತ್ತದೆ. ನಮಗೆ ಮೊದಲು ಕಾರ್ಯಕ್ರಮಗಳು ಹೇಗೆ ನಡೆಯುತ್ತಿತ್ತೊ ಹಾಗೆ ನಡೆಯಲೇ ಬೇಕು. ಡಿಸಿಎಂ ಮೊನ್ನೆ ತುಳು ಸಂಸ್ಕೃತಿ ಬಗ್ಗೆ ಮಾತನಾಡಿದ್ದರು. ಆದರೆ ಇಲ್ಲಿ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದರು. ಇಂದು ಕಡಿಮೆ ಜನ ಸೇರಿ ಜನಾಗ್ರಹ ಸಭೆ ಮಾಡಿದ್ದೇವೆ ಮುಂದೆ ಲಕ್ಷಗಟ್ಟಲೆ ಜನ ಸೇರಿ ಧರಣಿ ಮಾಡಬೇಕಾದ ಪರಿಸ್ಥಿತಿ ಬರಬಹುದು ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು.

ತುಳುನಾಡಿನ ಸಾಂಸ್ಕೃತಿಕ ವೇದಿಕೆಯ ಮೇಲೆ ಪಿತೂರಿ ನಡೆದಿದೆ, ಏನಿದ್ದರೂ ನಮ್ಮಲ್ಲಿ ಮೊದಲು ಪ್ರಯೋಗ ಮಾಡಿ ಆಮೇಲೆ ಇಡೀ ದೇಶಕ್ಕೆ ವಿಸ್ತರಿಸುತ್ತಾರೆ. ಅಂತಹದ್ದೇ ಪರಿಪಾಠ ಈಗ ಎದುರಾಗಿದೆ. ರಾತ್ರಿ ಕೋಲಕ್ಕೆ ಗೆಜ್ಜೆ ಕಟ್ಟಿದರೆ ಅದನ್ನು ನಿಲ್ಲಿಸುವ, ಕೆಂಡ ಸೇವೆಗೆ ಸಿದ್ಧತೆಯಾಗಿ 12 ಗಂಟೆ ಆಯ್ತು ಅಂತ ಅದನ್ನು ನಿಲ್ಲಿಸುವ ಕಾಲ ಬರಬಹುದು. ಆಗ ನಿಲ್ಲಿಸಲು ಬಂದವರನ್ನೂ ನಿಗಿ ನಿಗಿ ಕೆಂಡಕ್ಕೆ ದೂಡಿ ಹಾಕುವ ಸ್ಥಿತಿಯೂ ಬರಬಹುದು ಎಂದು ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಹೇಳಿದರು.

Share Information