ಮಂಗಳೂರು ಅಕ್ಟೋಬರ್ 01: ಆಸ್ಪತ್ರೆಯ ಬಿಲ್ ಪಾವತಿಸದೇ ಮೃತದೇಹವನ್ನು ಬಿಟ್ಟುಕೊಡುವುದಿಲ್ಲ ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆ ನಿರಾಕರಿಸಿದ ಘಟನೆ ನಡೆದಿದ್ದು, ಡಿವೈಎಫ್ಐ ಸಂಘಟನೆಯ ಮಧ್ಯಪ್ರವೇಶದಿಂದ ಕೊನೆಗೂ ಯಾವುದೇ ಹಣ ಪಡೆಯದೇ ಆಸ್ಪತ್ರೆ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಟ್ಟಿದೆ.

ಪರಿಶಿಷ್ಟ ಜಾತಿಗೆ ಸೇರಿದ ಮೂಡಬಿದ್ರೆಯ ಮಹಾಬಲ ಎನ್ನುವವರು ಉಸಿರಾಟದ ಸಮಸ್ಯೆ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ಮೂರು ದಿನದ ಹಿಂದೆ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರ ತಂಡ ಹೃದಯದಲ್ಲಿ ಸಮಸ್ಯೆಯಿದೆ ಎಂದು ಬೈಪಾಸ್ ಸರ್ಜರಿ ನಡೆಸಿರುತ್ತಾರೆ. ಸರ್ಜರಿ ನಂತರ ಆರೋಗ್ಯದಲ್ಲಿ ಏರುಪೇರಾಗಿ ನಿನ್ನೆ ಸಂಜೆ 6 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಈ ರೋಗಿಗೆ ಇನ್ಸುರೆನ್ಸ್ ಇದೆ ಎಂದು ಬೇಕಾಬಿಟ್ಟಿ ಬಿಲ್ಲು ವಿಧಿಸಿ ಸುಮಾರು 5.5 ಲಕ್ಷ ಮೊತ್ತ ಕಟ್ಟಲು ಹೇಳಿದ್ದಾರೆ. ಆದರೆ ಇನ್ಸುರೆನ್ಸ್ ನಲ್ಲಿ ಕೇವಲ 1.5 ಲಕ್ಷ ಕವರಾಗುತ್ತಿದ್ದು ಬಾಕಿ ಮೊತ್ತವನ್ನು ಕಟ್ಟದೆ ಮೃತದೇಹವನ್ನು ಕೊಡುವುದಿಲ್ಲವೆಂದು ನಿನ್ನೆಯಿಂದ ಆ ರೋಗಿಯ ಮೃತದೇಹವನ್ನು ಬಂಧನದಲ್ಲಿರಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಡಿವೈಎಫ್ಐ ನಿಯೋಗ ಅವರ ಮನೆ ಮಂದಿಗೆ ಬೆಂಬಲವಾಗಿ ನಿಂತು ಒಂದು ಬಿಡಿಗಾಸು ಕಟ್ಟದೆ ಮೃತದೇಹವನ್ನು ಬಿಡಿಸಿಕೊಟ್ಟಿದೆ. ಊರಿನ ಪಕ್ಕಲಡ್ಕ ಯುವಕ ಮಂಡಲದ ಯುವಕರು ತಮ್ಮೂರಿನ ಆಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ಅವರ ಮನೆಗೆ ತಲುಪಿಸುವ ಕಾರ್ಯಕ್ಕೆ ಮಾಡಿದ್ದಾರೆ.