DAKSHINA KANNADA
ಕರ್ನಾಟಕದಿಂದ ಕೇರಳಕ್ಕೆ ವಿದ್ಯುತ್ ಲೈನ್ – ವಿಟ್ಲದಲ್ಲಿ ಸರ್ವೆಗೆ ಬಂದ ಕಂಪೆನಿ ವಿರುದ್ದ ತಿರುಗಿ ಬಿದ್ದ ಕೃಷಿಕರು

ವಿಟ್ಲ ಅಕ್ಟೋಬರ್ 10: ಕರ್ನಾಟಕದಿಂದ ಕೇರಳಕ್ಕೆ ವಿದ್ಯುತ್ ಲೈನ್ ನಿರ್ಮಾಣಕ್ಕೆ ಸರ್ವೆ ಮಾಡಲು ಬಂದು ಅಧಿಕಾರಿಗಳ ವಿರುದ್ದ ವಿಟ್ಲ ಭಾಗದ ಕೃಷಿಕರು ತಿರುಗಿ ಬಿದ್ದಿದ್ದು, ಪ್ರತಿಭಟನೆ ನಡೆಸಿದ್ದಾರೆ. ರೈತರನ್ನು ಕತ್ತಲಲ್ಲಿಟ್ಟು ಬೆಲೆಬಾಳುವ ಜಮೀನಿನ ಮೇಲೆ ಸವಾರಿ ಮಾಡಲು ಹೊರಟಿರುವ ಕಂಪೆನಿ ವಿರುದ್ದ ಕೃಷಿಕರೇ ತಿರುಗಿಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಮಂಗಳವಾರ ನಡೆದಿದೆ.
ಸರ್ವೇ ಮಾಡದೆ ರೈತರಿಗೆ ಮಾಹಿತಿ ನೀಡದೆ, ಮುಖಾಮುಖಿ ಸಭೆ ನಡೆಸದೆ, ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈರಿಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಯತ್ನಿಸಿದಾಗ ಪರಿಸರದ ರೈತಾಪಿವರ್ಗದವರು ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ ವಿಷಯ ತಿಳಿದು ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾಮಗಾರಿಗಳನ್ನು ನಿಲ್ಲಿಸಬೇಕು ಮತ್ತು ಈ ಭಾಗದ ರೈತರ ಸಭೆ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಡಿ.ಸಿಯವರು ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸುವಂತೆ ಬಂಟ್ವಾಳ ತಹಸೀಲ್ದಾರವರಿಗೆ ಸೂಚಿಸಿದರು. ಪ್ರತಿಭಟನಾ ವಿಚಾರ ತಿಳಿದು ಅರುಣ್ ಕುಮಾರ್ ಪುತ್ತಿಲ ಅವರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸ್ಥಳದಲ್ಲಿದ್ದ ಪ್ರತಿಭಟನಾಕಾರರ ಜೊತೆ ಮಾತನಾಡಿದ ಅವರು ಹೋರಾಟಗಾರರಿಗೆ ಮತ್ತು ಕೃಷಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.