ನವದೆಹಲಿ, ಫೆಬ್ರವರಿ 24: ರಷ್ಯಾ-ಉಕ್ರೇನ್ ಮೇಲೆ ಯುದ್ಧ ಆರಂಭಿಸುತ್ತಿದ್ದಂತೆ ಭಾರತ ಮಧ್ಯಪ್ರವೇಶಿಸಬೇಕೆಂಬ ಮಾತು ಕೇಳಿಬರುತ್ತಿದ್ದು. ಇದೀಗ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಇಂದು ರಾತ್ರಿ ಮಾತುಕತೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಅರಂಭಿಸುತ್ತಿದ್ದಂತೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೂರ್ ಪೋಲಿಖಾ, ಮೋದಿಯವರು ರಷ್ಯಾ ಅಧ್ಯಕ್ಷರಾದ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಬೇಕು. ಈಗಾಗಲೇ ಯುದ್ಧ ಆರಂಭವಾಗಿದೆ. ಇದರಿಂದ ಉಕ್ರೇನ್ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ರಷ್ಯಾದ 5 ಯುದ್ಧ ವಿಮಾನ, 2 ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಟ್ರಕ್ಗಳನ್ನು ಈಗಾಗಲೇ ಉಕ್ರೇನ್ ಮಿಲಿಟರಿ ಪಡೆ ಹೊಡೆದುರುಳಿಸಿದೆ. ನಾವು ಈ ಮೊದಲು ರಷ್ಯಾದ ಮಿಲಿಟರಿ ಪಡೆ ನಮ್ಮ ಗಡಿ ಪ್ರದೇಶದಿಂದ ಒಳಬರದಂತೆ ತಿಳಿಸಿದ್ದೇವು ಆದರೂ ಬಂದಿದ್ದಾರೆ ಹಾಗಾಗಿ ಉಕ್ರೇನ್, ರಷ್ಯಾದ ಮಿಲಿಟರಿ ಪಡೆಗಳನ್ನು ಹೊಡೆದುರುಳಿಸಿದೆ. ಈಗಾಗಲೇ ಪರಿಸ್ಥಿತಿ ಕೈಮೀರುತ್ತಿದ್ದು, ಭಾರತ ಕೂಡಲೇ ಮಧ್ಯಪ್ರವೇಶಿಸಿ ಮಾತುಕತೆಗೆ ಮುಂದಾಗಿ ಎಂದು ಕೇಳಿಕೊಂಡಿದ್ದರು.
ವಿಶ್ವದ ಹಲವು ದೇಶಗಳೂ ಕೂಡ ಭಾರತ ಮಧ್ಯಪ್ರವೇಶಿಸಬೇಕೆಂದು ಅಭಿಪ್ರಾಯಪಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಭಾರತದ ಪ್ರಧಾನಿ ಮೋದಿ ಮಾತುಕತೆ ನಡೆಸಿದರೆ ಯುದ್ಧ ನಿಲ್ಲಿಸಬಹುದೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.