ಪುತ್ತೂರು ಜೂನ್ 25: ಪುತ್ತೂರಿನ ಬನ್ನೂರಿನ ಚೆಲುವಮ್ಮನ ಕಟ್ಟೆ ಬಳಿ ವ್ಯಕ್ತಿಯೋರ್ವರಿಗೆ ಕೊರೊನಾ ಪಾಸಿಟೀವ್ ಪತ್ತೆಯಾದ ಬಳಿಕ ಆ ವ್ಯಕ್ತಿಯ ಮನೆಯನ್ನು ಆರೋಗ್ಯ ಇಲಾಖೆಯಿಂದ ಸೀಲ್ ಡೌನ್ ಮಾಡಲಾಗಿದೆ.

ಆದರೆ ಕೇವಲ ಮನೆಯ ಸುತ್ತ ಬ್ಯಾರಿಕೇಡ್ ಗಳನ್ನು ಅಳವಡಿಸಿರುವುದನ್ನು ಬಿಟ್ಟರೆ ಈ ಪ್ರದೇಶದಲ್ಲಿ ಆರೋಗ್ಯ ಸಿಬ್ಬಂದಿಗಳಾಗಲೀ, ಪೋಲೀಸರನ್ನು ನೇಮಿಸುವ ಕಾರ್ಯ ನಡೆದಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬರಲಾರಂಭಿಸಿದೆ. ಕೊರೊನಾ ಪಾಸಿಟೀವ್ ಪತ್ತೆಯಾದ ಮನೆಗೆ ಹೊರಗಡೆಯ ವ್ಯಕ್ತಿಗಳು ಹೋಗುವುದು, ಬರುವುದೂ ನಡೆಯುತ್ತಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದ್ದು, ಈ ಬೆಳವಣಿಗೆಯಿಂದಾಗಿ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿದೆ.

ಬನ್ನೂರಿನ ಚೆಲುವಮ್ಮನ ಕಟ್ಟೆ ಬಳಿಯಿರುವ ಪತ್ನಿ ಮನೆಗೆ ಬಂಟ್ವಾಳ ಮೂಲದ ಪಾಸಿಟೀವ್ ವ್ಯಕ್ತಿ ಬಂದಿದ್ದರು. ಪತ್ನಿ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದ ಸಂದರ್ಭದಲ್ಲಿ ವೈದ್ಯರು ವ್ಯಕ್ತಿಯ ಗಂಟಲು ದ್ರವದ ಪರೀಕ್ಷೆ ನಡೆಸಿದ್ದರು. ಇದರ ವರದಿಯಲ್ಲಿ ಕೊರೊನಾ ಪಾಸಿಟೀವ್ ಬಂದ ಹಿನ್ನಲೆಯಲ್ಲಿ ವ್ಯಕ್ತಿಯಿದ್ದ ಆತನ ಪತ್ನಿಯ ಮನೆ ಹಾಗೂ ಮನೆ ಮಂದಿಗೆಲ್ಲಾ ಹೋಂ ಕ್ವಾರೈಂಟೈನ್ ಮಾಡಲಾಗಿದೆ.