LATEST NEWS
ಪ್ರಯಾಣಿಕರ ಗಮನಕ್ಕೆ – ಜುಲೈ 1 ರಿಂದ ಮಂಗಳೂರು ಸೆಂಟ್ರಲ್ – ವಿಜಯಪುರ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ

ಮಂಗಳೂರು ಜೂನ್ 07: ಮಂಗಳೂರಿನ ಅತ್ಯಂತ ಬೇಡಿಕೆ ರೈಲು ಆಗಿರುವ ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ರೈಲಿನ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು. ಜುಲೈ 1ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.
ಮಂಗಳೂರು ಸೆಂಟ್ರಲ್ – ವಿಜಯಪುರ ರೈಲು (ಸಂಖ್ಯೆ – 07378) ಪ್ರಸ್ತುತ ಮಧ್ಯಾಹ್ನ 2.35ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುತ್ತಿದ್ದು, ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ. ಜುಲೈ 1ರಿಂದ ಇದು ಸಂಜೆ 4.45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 11.15ಕ್ಕೆ ವಿಜಯಪುರ ತಲುಪಲಿದೆ.

ಕೋವಿಡ್ ಪೂರ್ವ ಕಾಲಘಟ್ಟದಲ್ಲಿ ಈ ರೈಲು ಸಂಜೆ 4.30ಕ್ಕೆ ಮಂಗಳೂರಿನಿಂದ ಹೊರಡುತ್ತಿದ್ದು, ಬಳಿಕ ಪರಿಷ್ಕರಣೆ ಮಾಡಿ ಮಧ್ಯಾಹ್ನ 2.35ಕ್ಕೆ ಬದಲಾಯಿಸಲಾಗಿತ್ತು. ಹಿಂದಿನಂತೆ ಸಮಯ ನಿಗದಿ ಮಾಡುವಂತೆ ರೈಲು ಪ್ರಯಾಣಿಕರು, ರೈಲು ಹೋರಾಟಗಾರರು ಮನವಿ ಮಾಡಿದ್ದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಕೂಡ ರೈಲ್ವೆಗೆ ಪತ್ರ ಬರೆದು ರೈಲು ಹೊರಡುವ ಸಮಯವನ್ನು ಈ ಮೊದಲಿನಂತೆ ಸಂಜೆಗೆ ಮರು ನಿಗದಿ ಮಾಡುವಂತೆ ಸೂಚನೆ ನೀಡಿದ್ದರು. ಇದೀಗ ರೈಲ್ವೆ ಈ ಬೇಡಿಕೆಗೆ ಸ್ಪಂದಿಸಿ ವೇಳಾಪಟ್ಟಿ ಮರು ನಿಗದಿ ಮಾಡಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ಈ ರೈಲು ಸಂಜೆ 4.45ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಡಲಿದ್ದು, ಕಬಕ ಪುತ್ತೂರು ನಿಲ್ದಾಣಕ್ಕೆ 6 ಗಂಟೆಗೆ, ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ 6.50ಕ್ಕೆ ತಲುಪಲಿದೆ. ಈ ರೈಲು ಮಂಗಳೂರು ಸೆಂಟ್ರಲ್, ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ ಹಾಸನ, ಅರಸೀಕೆರೆ, ಕಡೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ ಜಂಕ್ಷನ್, ಗದಗ ಜಂಕ್ಷನ್, ಬಾದಾಮಿ, ಬಾಗಲಕೋಟೆ ಮೂಲಕ ವಿಜಯಪುರ ತಲುಪುತ್ತದೆ.