ಕಾಠ್ಮಂಡು: ನೇಪಾಳದಲ್ಲಿ ಭಾರಿ ಪ್ರಮಾಣದ ಭೂಕಂಪನ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ಹೊಂದಿದ್ದು ಪ್ರಾರ್ಥಮಿಕ ವರದಿಗಳ ಪ್ರಕಾರ 128 ಮಂದಿ ಸಾವನ್ನಪ್ಪಿದ್ದಾರೆ.

ದುರಂತದಲ್ಲಿ ನೂರಾರು ಮಂದಿ ಗಾಯಗೊಂಡಿದ್ದರೆ ಸಾವಿರಾರು ನ ಮನೆ ಮಠ ಕಳಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಭೂಕಂಪಪೀಡಿತ ಪ್ರದೇಶಗಳಲ್ಲಿ ಮನೆಗಳು ಕುಸಿದು ಬಿದ್ದಿದ್ದು ಜನ ಬೀದಿಗೆ ಬಿದ್ದಿದ್ದಾರೆ. ರಕ್ಷಣಾ ಕಾರ್ಯಗಳು ಆರಂಭವಾಗಿದ್ದು ಕೆಲವೆಡೆ ಇನ್ನೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲವೆಂದು ಸ್ಥಳೀಯ ಅಧಿಕಾರಿ ಹರೀಶ್ ಚಂದ್ರ ಶರ್ಮಾ ಮಾಹಿತಿ ನೀಡಿದ್ದಾರೆ. ಭೀಕರ ದುರಂತದ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ.

ಭೂಕಂಪದ ಕೇಂದ್ರ ಬಿಂದುವಿನಿಂದ ಸುಮಾರು 800 ಕಿಲೋಮೀಟರ್ ದೂರದಲ್ಲಿರುವ ಭಾರತದ ರಾಜಧಾನಿ ಹೊಸದಿಲ್ಲಿ ಪ್ರದೇಶದಲ್ಲಿ ಕೂಡಾ ಭೂಕಂಪದ ಅನುಭವ ಆಗಿದೆ. ಆದರೆ ಬಹುತೇಕ ಮಂದಿ ನಿದ್ದೆಯಲ್ಲಿ ಇದ್ದ ಸಂದರ್ಭದಲ್ಲಿ ಇದು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಶುಕ್ರವಾರ ಮಧ್ಯರಾತ್ರಿಗಿಂತ ಸ್ವಲ್ಪ ಮುಂಚೆ ಈ ದುರಂತ ಸಂಭವಿಸಿದ್ದು, ಪರ್ವತಶ್ರೇಣಿಗಳಿಂದ ಕೂಡಿದ ಗ್ರಾಮದಲ್ಲಿ ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. 128 ಮಂದಿ ಈಗಾಗಲೇ ಮೃತಪಟ್ಟಿದ್ದು, ಹಲವು ಪ್ರದೇಶಗಳ ಜತೆ ಸಂಪರ್ಕ ವ್ಯವಸ್ಥೆ ಕಡಿದು ಹೋಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 2015ರಲ್ಲಿ ಈ ಬೆಟ್ಟ ರಾಷ್ಟ್ರದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿ, 9 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟು, 10 ಲಕ್ಷ ಕಟ್ಟಡಗಳು ಹಾನಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.



