DAKSHINA KANNADA
ನೆಲ್ಯಾಡಿ – ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ – 16 ಮಂದಿಗೆ ಗಾಯ

ನೆಲ್ಯಾಡಿ ಜೂನ್ 07: ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬರ್ಚಿನಹಳ್ಳಿ ತಿರುವಿನಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಅಪಘಾತದಲ್ಲಿ 16ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಹೆಚ್ಚಿನವರು ಹಬ್ಬದ ಪ್ರಯುಕ್ತ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಬೆಳಗಿನ ಜಾವ ಪ್ರಯಾಣಿಕರು ನಿದ್ದೆಯ ಮುಂಪರೆಯಲ್ಲಿರುವ ಸಂದರ್ಭದಲ್ಲಿ ಗುಂಡ್ಯ ಸಮೀಪದ ಬರ್ಚಿನಹಳ್ಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ಪಲ್ಟಿ ಹೊಡೆದಿದೆ ಅದೃಷ್ಟವಶಾತ್ ಯಾವುದೇ ರೀತಿಯ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಘಟನೆಯಲ್ಲಿ ಗಾಯಗೊಂಡವರನ್ನು ಫಹದ್ (20) ಮೂಡಬಿದ್ರೆ, ರಂಝೀನ್(25) ಪರಂಗಿಪೇಟೆ, ಉಮ್ಮರ್ (53)ದೇರಳಕಟ್ಟೆ, ತಮೀನ್(19) ಪುತ್ತೂರು, ಇಷಾಮ್(19) ಸಾಲ್ಮರ ಪುತ್ತೂರು, ರುಕ್ಮಯ(24) ಉಪ್ಪಿನಂಗಡಿ, ಜಾಹಿರ್ (23) ಸಾಲೆತ್ತೂರು ಬಂಟ್ವಾಳ, ಶಮೀರ್ (28) ವಿಟ್ಲ, ಆನ್ಸರ್ (26) ವಿಟ್ಲ, ಸೋಮಶೇಖರ (55) ದಾಸರಪುರ ಬೆಂಗಳೂರು, ಶರತ್(35) ದಾಸರಪುರ ಬೆಂಗಳೂರು, ಡಾ. ಮಹಂತ್ ಗೌಡ (47) ನೆಲಮಂಗಲ ಬೆಂಗಳೂರು, ಸಿಮಾಕ್ (23), ಅಬ್ದುಲ್ ರಜೀದ್ (38) ಸಂಪ್ಯ ಪುತ್ತೂರು, ಪೌಝಿಲ್ (23), ಕೈಕಂಬ ಮೂಡುಬಿದ್ರೆ, ಅಲ್ತಾಫ್(28) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪ್ರಥಮ ಚಿಕಿತ್ಸೆಯನ್ನು ಪಡೆದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ 12 ಮಂದಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.